ನವದೆಹಲಿ: ಎಲ್ಗಾರ್ ಪರಿಷತ್ -ಮಾವೋವಾದಿ ಸಂಪರ್ಕ ಪ್ರಕರಣದಲ್ಲಿ ಕಳೆದ ಐದು ವರ್ಷಗಳಿಂದ ಬಂಧನದಲ್ಲಿದ್ದ ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರಾರೆ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಜಾಮೀನು ನೀಡಿದೆ. ಇವರಿಬ್ಬರೂ ಮಹಾರಾಷ್ಟ್ರ ತೊರೆಯುವಂತಿಲ್ಲ ಹಾಗೂ ಪಾಸ್ ಪೋರ್ಟ್ ಗಳನ್ನು ಪೊಲೀಸರಿಗೆ ಒಪ್ಪಿಸಬೇಕು ಎಂದು ನ್ಯಾಯಮೂರ್ತಿಗಳಾದ ಅನುರಾಧ ಬೋಸ್ ಹಾಗೂ ಸುಧಾಂಶು ಧುಲಿಯಾ ಅವರಿದ್ದ ನ್ಯಾಯಪೀಠ ಹೇಳಿದೆ.
ಇಬ್ಬರಿಗೂ ತಲಾ ಒಂದು ಮೊಬೈಲ್ ಬಳಕೆ ಮಾಡಲು ಅನುಮತಿ ನೀಡಲಾಗಿದ್ದು, ಅವರು ಉಳಿಯುವ ವಿಳಾಸದ ಬಗ್ಗೆ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಮಾಹಿತಿ ನೀಡಬೇಕು. ಇಬ್ಬರ ಫೋನ್ ಲೋಕೇಷನ್ ನಿತ್ಯವೂ ಆನ್ ಇರಬೇಕು. ವಾರಕ್ಕೊಮ್ಮೆ ತನಿಖಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಜಾಮೀನು ನೀಡುವಾಗ ಸುಪ್ರೀಂಕೋರ್ಟ್ ಹೇಳಿದೆ.
ತಮ್ಮ ಜಾಮೀನು ಅರ್ಜಿಗಳನ್ನು ತಿರಸ್ಕರಿಸಿದ ಬಾಂಬೆ ಹೈಕೋರ್ಟ್ ಆದೇಶದ ವಿರುದ್ಧ ವೆರ್ನಾನ್ ಗೊನ್ಸಾಲ್ವೆಸ್ ಮತ್ತು ಅರುಣ್ ಫೆರಾರೆ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಇದು 2017ರ ಡಿಸೆಂಬರ್ 31 ರಂದು ಪುಣೆಯಲ್ಲಿ ಎಲ್ಗಾರ್ ಪರಿಷತ್ ಗೆ ಸಂಬಂಧಿಸಿದ್ದಾಗಿದೆ. ಇದಕ್ಕೆ ಮಾವೋವಾದಿಗಳು ಹಣಕಾಸಿನ ಬೆಂಬಲ ನೀಡಿದ್ದಾರೆ ಎಂದು ಪುಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ಭಾಗಿಯಾದ್ದವರ ಪ್ರಚೋದನಾಕಾರಿ ಭಾಷಣದಿಂದ ಪುಣೆಯ ಕೋರೆಗಾಂವ್-ಭೀಮಾ ಯುದ್ಧ ಸ್ಮಾರಕದಲ್ಲಿ ಹಿಂಸಾಚಾರ ಉಂಟಾಯಿತು ಎಂದು ಪೊಲೀಸರು ಆರೋಪಿಸಿದ್ದಾರೆ.