ದೆಹಲಿ ಪಾರ್ಕ್ ನಲ್ಲಿ ಯುವತಿ ಕೊಲೆ 
ದೇಶ

ಮದುವೆಗೆ ನಿರಾಕರಣೆ: ಹಾಡಹಗಲೇ ಪಾರ್ಕ್ ನಲ್ಲಿ ವಿದ್ಯಾರ್ಥಿನಿ ತಲೆಗೆ ರಾಡ್ ನಿಂದ ಹೊಡೆದು ಭೀಕರ ಕೊಲೆ

ಮದುವೆಗೆ ನಿರಾಕರಿಸಿದ ಒಂದೇ ಕಾರಣಕ್ಕೆ ಹಾಡಹಗಲೇ ಪಾರ್ಕ್ ನಲ್ಲಿ ಕುಳಿತಿದ್ದ 25 ವರ್ಷದ ವಿದ್ಯಾರ್ಥಿನಿ ತಲೆಗೆ ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ನವದೆಹಲಿ: ಮದುವೆಗೆ ನಿರಾಕರಿಸಿದ ಒಂದೇ ಕಾರಣಕ್ಕೆ ಹಾಡಹಗಲೇ ಪಾರ್ಕ್ ನಲ್ಲಿ ಕುಳಿತಿದ್ದ 25 ವರ್ಷದ ವಿದ್ಯಾರ್ಥಿನಿ ತಲೆಗೆ ರಾಡ್ ನಿಂದ ಹೊಡೆದು ಭೀಕರವಾಗಿ ಕೊಲೆ ಮಾಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ದಕ್ಷಿಣ ದೆಹಲಿಯ ಮಾಳವೀಯ ನಗರದ ಅರಬಿಂದೋ ಕಾಲೇಜು ಬಳಿಯ ಉದ್ಯಾನವನದಲ್ಲಿ ಈ ಘಟನೆ ನಡೆದಿದ್ದು, ರಾಡ್‌ನಿಂದ ಹಲ್ಲೆ ನಡೆಸಿ ಕಾಲೇಜು ವಿದ್ಯಾರ್ಥಿನಿಯೊಬ್ಬರನ್ನು ಹತ್ಯೆ ಮಾಡಲಾಗಿದೆ. ಮೃತ ವಿದ್ಯಾರ್ಥಿನಿ ಕಮಲಾ ನೆಹರು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಸ್ನೇಹಿತನೊಂದಿಗೆ ಉದ್ಯಾನವನಕ್ಕೆ ತೆರಳಿದ್ದಳು. ಘಟನೆ ಸಂಬಂಧ 28 ವರ್ಷದ ಆರೋಪಿ ಇರ್ಫಾನ್‌ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಮಾಳವೀಯಾ ನಗರದ ಅರಬಿಂದೋ ಕಾಲೇಜು ಬಳಿ 25 ವರ್ಷದ ಯುವತಿಯ ಶವ ಪತ್ತೆಯಾಗಿದೆ. ವಿದ್ಯಾರ್ಥಿನಿ ಮೇಲೆ ರಾಡ್‌ನಿಂದ ಹಲ್ಲೆ ನಡೆಸಲಾಗಿದ್ದು, ತಲೆಗೆ ಬಲವಾದ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಡಿಸಿಪಿ ಚಂದನ್ ಚೌಧರಿ ತಿಳಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಬಂಧಿತ ಇರ್ಫಾನ್ ಮೃತ ಯುವತಿಯೊಂದಿಗೆ ಮದುವೆಯಾಗಲು ಬಯಸಿದ್ದ. ಆದರೆ, ಯುವತಿ ಮನೆಯವರು ಮದುವೆಗೆ ನಿರಾಕರಿಸಿದ್ದರು, ಇದೇ ಕಾರಣಕ್ಕೆ ಆಕ್ರೋಶಗೊಂಡಿದ್ದ ಇರ್ಫಾನ್ ಆಕೆಯ ಮೇಲೆ ರಾಡ್ ನಿಂದ ಹಲ್ಲೆ ಮಾಡಿ ಕೊಂದು ಹಾಕಿದ್ದಾನೆ. ಮೃತ ಯುವತಿಯ ಶವದ ಬಳಿ ರಾಡ್ ಕೂಡ ಪತ್ತೆಯಾಗಿದೆ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಕ್ಷಿಣ ದೆಹಲಿಯ ಡಿಸಿಪಿ ಚಂದನ್ ಚೌಧರಿ ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು "ಇಡೀ ಘಟನೆಯು ಮೂಲತಃ ಪ್ರೇಮ ಕೋನ ಮತ್ತು ಮದುವೆ ನಿರಾಕರಣೆಯ ಹಿನ್ನಲೆ ಹೊಂದಿದೆ. ಸಂತ್ರಸ್ತೆ (22 ವರ್ಷ) ಮತ್ತು ಆರೋಪಿ (28 ವರ್ಷ) ಸೋದರ ಸಂಬಂಧಿಗಳಾಗಿದ್ದು, ಮೃತ ಯುವತಿಯ ಕುಟುಂಬವು ಆರೋಪಿ ಇರ್ಫಾನ್ ನಿರುದ್ಯೋಗಿಯಾಗಿದ್ದರಿಂದ ಮದುವೆಗೆ ನಿರಾಕರಿಸಿತ್ತು. ತರುವಾಯ, ಹುಡುಗಿ ಅವನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ಹುಡುಗ ಮಾನಸಿಕವಾಗಿ ತೊಂದರೆಗೀಡಾಗಿದ್ದನು ... ಆದ್ದರಿಂದ ಅವನು ಇಂದು ಈ ಅಪರಾಧವನ್ನು ಮಾಡಿದ್ದಾನೆ ... ಅವನು ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

‘ಮಾಳವೀಯಾ ನಗರದಂತಹ ಐಷಾರಾಮಿ ಪ್ರದೇಶದಲ್ಲಿ, ರಾಡ್‌ನಿಂದ ಹೊಡೆದು ಯುವತಿಯನ್ನು ಹತ್ಯೆ ಮಾಡಲಾಗಿದೆ. ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ’ ಎಂದು ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲೀವಾಲ್ ಟ್ವೀಟ್ ಮಾಡಿದ್ದಾರೆ. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬೆಂಗಳೂರಲ್ಲಿ ಆಪರೇಷನ್‌ ಫುಟ್‌ಪಾತ್‌: ಇದುವರೆಗೆ 9,878 ಅತಿಕ್ರಮಣ ತೆರವು; CM ಡಿಕೆಶಿ ಸಿಟಿ ರೌಂಡ್ಸ್!

Kumbh Mela viral girl ಮೊನಾಲಿಸಾ 'ನಾಪತ್ತೆ'​: ಪೊಲೀಸ್ ರಕ್ಷಣೆ ಹಿಂಪಡೆದ ಕೇರಳ ಹೈಕೋರ್ಟ್

BJP ಆರೋಪಗಳ ಬೆನ್ನಲ್ಲೇ ಮಂಗಳೂರಿನಲ್ಲಿ 8 ಬಾಂಗ್ಲಾದೇಶಿ ಪ್ರಜೆಗಳ ಬಂಧನ; ಗಡಿಪಾರಿಗೆ ಸಿದ್ಧತೆ

ವಿಜಯಪುರದಲ್ಲಿ ಭೀಕರ ಅಪಘಾತ: ಡಿವೈಡರ್‌ಗೆ ಕಾರು ಡಿಕ್ಕಿ; ಇಬ್ಬರು ಪುತ್ರರ ಜೊತೆ ತಾಯಿ ಸ್ಥಳದಲ್ಲೇ ಸಾವು!

'ಮಮತಾರಂತೆ ನಾನು ದುರ್ಬಲ, ಹೇಡಿ CM ಅಲ್ಲ': ಶಾಸಕ ಹುಮಾಯೂನ್ ಕಬೀರ್​ ಬೆವರಿಳಿಸಿದ ಸುವೇಂದು ಅಧಿಕಾರಿ