ದೇಶ

ಒಡಿಶಾ ರೈಲು ದುರಂತ: ಸಿಬಿಐನಿಂದ ತನಿಖೆ ಆರಂಭ, ಸ್ಥಳಕ್ಕೆ ಅಧಿಕಾರಿಗಳ ಭೇಟಿ

Manjula VN

ಭುವನೇಶ್ವರ: 278 ಜನರ ಸಾವಿಗೆ ಕಾರಣವಾದ ಒಡಿಶಾದ ಬಾಲಸೋರ್ ರೈಲು ಅಪಘಾತದ ತನಿಖೆಯನ್ನು ಕೇಂದ್ರೀಯ ತನಿಖಾ ದಳ (CBI) ಮಂಗಳವಾರ ಅಧಿಕೃತವಾಗಿ ಆರಂಭಿಸಿದೆ.

ಅಪಘಾತದ ತನಿಖೆಯನ್ನು ಪ್ರಾರಂಭಿಸಿರುವ ಸಿಬಿಐ ಅಧಿಕಾರಿಗಳು, ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ದಾಖಲೆಗಳು ಹಾಗೂ ಹೇಳಿಕೆಗಳನ್ನು ಸಂಗ್ರಹಿಸುತ್ತಿದೆ. 10 ಸದಸ್ಯರ ಸಿಬಿಐ ತಂಡ ಸೋಮವಾರ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಾಥಮಿಕ ತನಿಖಾ ವರದಿ ಸೇರಿದಂತೆ ಬೇರೆ ಬೇರೆ ಆಯಾಮಗಳಲ್ಲಿ ಮಾಹಿತಿಗಳನ್ನು ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.

ಇಕೋಆರ್‌ನ ಖುರ್ದಾ ರಸ್ತೆ ವಿಭಾಗದ ಡಿಆರ್‌ಎಂ ರಿಂತೇಶ್ ರೇ ಅವರು ಮಾತನಾಡಿ, ಸಿಬಿಐ ತನಿಖೆ ಪ್ರಾರಂಭವಾಗಿದೆ. ಆದರೆ, ಈ ಕುರಿತ ವಿವರಗಳು ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.

ಅಪಘಾತಕ್ಕೆ ಸಂಬಂಧಿಸಿದಂತೆ ಐಪಿಸಿ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್‍ಗಳ ಅಡಿಯಲ್ಲಿ ಒಡಿಶಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಘಟನೆಯ ಹಿಂದೆ ದುಷ್ಕೃತ್ಯದ ಅನುಮಾನಗಳಿರುವ ಹಿನ್ನೆಲೆ ಪ್ರಕರಣವನ್ನು ಸಿಬಿಐ ತನಿಖೆಗೆ ಶಿಫಾರಸು ಮಾಡಲಾಗಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದರು.

ಚಾಲಕ ಹಾಗೂ ವ್ಯವಸ್ಥೆಯ ಅಸಮರ್ಪಕತೆಯೇ ಘಟನೆಗೆ ಕಾರಣ ಎಂಬ ಆರೋಪಗಳು ಈ ಹಿಂದೆ ಕೇಳಿ ಬಂದಿತ್ತು. ಇದನ್ನು ತಳ್ಳಿಹಾಕಿದ್ದ ರೈಲ್ವೇ ಸಚಿವಾಲಯ ಎಲೆಕ್ಟ್ರಾನಿಕ್ ಇಂಟರ್ ಲಾಕಿಂಗ್'ನಲ್ಲಿನ ಬದಲಾವಣೆಯೆ ಅಪಘಾತಕ್ಕೆ ಕಾರಣ ಎಂದು ಹೇಳಿತ್ತು.

ಜೂನ್ 2 ರಂದು ಎರಡು ಪ್ಯಾಸೆಂಜರ್ ರೈಲುಗಳು ಮತ್ತು ಗೂಡ್ಸ್ ರೈಲು ಒಳಗೊಂಡ ಅಪಘಾತದಲ್ಲಿ 278 ಜನರು ಸಾವನ್ನಪ್ಪಿದರು ಮತ್ತು 1,100 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಸದ್ಯ ಘಟನಾ ಸ್ಥಳವನ್ನು ಸರಿಪಡಿಸಿದ್ದು ಮತ್ತೆ ಡೀಸೆಲ್ ಇಂಜಿನ್ ಸೇರಿದಂತೆ ಒಂದೇ ಭಾರತ್ ರೈಲು ಸಂಚಾರ ಆರಂಭಿಸಿದೆ. ಬುಧವಾರದಿಂದ ಎಲೆಕ್ಟ್ರಿಕ್ ಇಂಜಿನ್ ರೈಲು ಸಂಚಾರ ಆರಂಭಿಸಲಿದೆ.

SCROLL FOR NEXT