ದೇಶ

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: ಬಿಜೆಪಿ ನಾಯಕರ ಮನೆಗಳಿಗೆ ಬೆಂಕಿ ಹಚ್ಚಲು ಯತ್ನ, ಘರ್ಷಣೆ ವೇಳೆ ಇಬ್ಬರಿಗೆ ಗಾಯ

Manjula VN

ಇಂಫಾಲ: ಮಣಿಪುರದ ಇಂಫಾಲದಲ್ಲಿ ಹಿಂಸಾಚಾರ ಮತ್ತೆ ಭುಗಿಲೆದ್ದಿದೆ. ಬಿಜೆಪಿ ನಾಯಕರ ಮನೆಗಳನ್ನು ಗುರಿಯಾಗಿಸಿಕೊಂಡ ಗುಂಪೊಂದು ಬೆಂಕಿ ಹಚ್ಚಲು ಯತ್ನ ನಡೆಸಿದೆ. ಈ ವೇಳೆ ಭದ್ರತಾ ಪಡೆ ಹಾಗೂ ಗುಂಪಿನ ನಡುವೆ ಘರ್ಷಣೆ ಏರ್ಪಟ್ಟಿದ್ದು, ಘಟನೆಯಲ್ಲಿ ಇಬ್ಬರು ನಾಗರೀಕರಿಗೆ ಗಾಯಗಳಾಗಿವೆ ಎಂದು ಶನಿವಾರ ತಿಳಿದುಬಂದಿದೆ.

ಕ್ವಾಥಾ ಮತ್ತು ಕಾಂಗ್ವೈ ಪ್ರದೇಶಗಳಲ್ಲಿ  ನಿನ್ನೆ ರಾತ್ರಿ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಲಾಗಿದ್ದು ,ಇಂದು ಬೆಳಗಿನ ಜಾವದವರೆಗೂ ನಿರಂತರ ಗುಂಡಿನ ದಾಳಿಗಳು ನಡೆದಿವೆ ಎಂದು ವರದಿಗಳು ತಿಳಿಸಿವೆ.

ಸೇನೆ, ಅಸ್ಸಾಂ ರೈಫಲ್ಸ್, ರ್ಯಾಪಿಡ್ ಆಕ್ಷನ್ ಫೋರ್ಸ್ ಮತ್ತು ರಾಜ್ಯ ಪೊಲೀಸರ ಜಂಟಿ ಪಡೆಗಳು ಇಂಫಾಲ್ ಪೂರ್ವ ಜಿಲ್ಲೆಯಲ್ಲಿ ಮಧ್ಯರಾತ್ರಿಯವರೆಗೆ ಧ್ವಜ ಮೆರವಣಿಗೆಯನ್ನು ಕೈಗೊಂಡವು.

ಈ ನಡುವೆ ಅಡ್ವಾನ್ಸ್ ಆಸ್ಪತ್ರೆ ಬಳಿಯ ಅರಮನೆ ಕಾಂಪೌಂಡ್ ನಲ್ಲಿ ಬೆಂಕಿ ಹಚ್ಚುವ ಯತ್ನ ನಡೆದಿದೆ. ಸುಮಾರು 1,000 ಜನರ ಗುಂಪು ನಿನ್ನೆ ಸಂಜೆ ಒಟ್ಟುಗೂಡಿದ್ದು, ಬೆಂಕಿ ಮತ್ತು ವಿಧ್ವಂಸಕ ಕೃತ್ಯಕ್ಕೆ ಪ್ರಯತ್ನ ನಡೆಸಿದೆ.

ಈ ವೇಳೆ ಗುಂಪನ್ನು ಚದುರಿಸಲು ಆರ್‌ಎಎಫ್ ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಹಾರಿಸಿದ್ದು, ಇದರಲ್ಲಿ ಇಬ್ಬರು ನಾಗರಿಕರು ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.

ಇದರ ಜೊತೆಗೆ ಮಣಿಪುರ ವಿಶ್ವವಿದ್ಯಾನಿಲಯದ ಬಳಿಯೂ ಜನರು ಗುಂಪು ಸೇರಿದ್ದಾರೆ. ರಾತ್ರಿ 10.40ಕ್ಕೆ ತೊಂಗ್ಜು ಬಳಿ ಜಮಾಯಿಸಿದ 200ರಿಂದ 300 ಮಂದಿ, ಸ್ಥಳೀಯ ಶಾಸಕರ ನಿವಾಸವನ್ನು ಧ್ವಂಸಗೊಳಿಸಲು ಯತ್ನ ನಡೆಸಿದ್ದಾರೆ. ಈ ವೇಳೆ ಆರ್'ಎಎಫ್ ಗುಂಪನ್ನು ಚದುರಿಸಿತು.

ಮಧ್ಯರಾತ್ರಿ ಇಂಫಾಲ್ ವೆಸ್ಟ್‌ನಲ್ಲಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಅಧಿಕಾರಿಮಯುಮ್ ಶಾರದಾ ದೇವಿ ಅವರ ನಿವಾಸವನ್ನು ಧ್ವಂಸ ಮಾಡಲು ಗುಂಪು ಪ್ರಯತ್ನಿಸಿತು, ಆದರೆ, ಈ ಪ್ರಯತ್ನವನ್ನು ಸೇನೆ ಮತ್ತು ಆರ್‌ಎಎಫ್ ವಿಫಲಗೊಳ್ಳುವಂತೆ ಮಾಡಿದೆ.

ಈ ನಡುವೆ ಉದ್ರಿಕ್ತ ಗುಂಪೊಂದು ಮಣಿಪುರದ ತೊಂಗ್ಜುನಲ್ಲಿರುವ ಬಿಜೆಪಿ ಕಚೇರಿಯನ್ನು ಧ್ವಂಸಗೊಳಿಸಿದೆ.

SCROLL FOR NEXT