ದೇಶ

ಮಣಿಪುರ ಹಿಂಸಾಚಾರ: ಸಿಎಂ ಬಿರೇನ್ ಸಿಂಗ್ ರಾಜೀನಾಮೆ ನೀಡದಂತೆ ಒತ್ತಾಯಿಸಿ ಮಹಿಳೆಯರ ಪ್ರತಿಭಟನೆ

Sumana Upadhyaya

ಇಂಫಾಲ್: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರ ದಿನಕ್ಕೊಂದು ರೂಪ ಪಡೆಯುತ್ತಿದೆ. ಕಳೆದೆರಡು ತಿಂಗಳಿನಿಂದ ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಪ್ರತಿಭಟನೆ, ಹಿಂಸಾಚಾರಗಳಿಂದ ಬೇಸತ್ತು ಒಂದೆಡೆ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ.(Manipura violence)

ಈ ಮಧ್ಯೆ ಇಂದು ರಾಜಧಾನಿ ಇಂಫಾಲ್ ನಲ್ಲಿರುವ ಮುಖ್ಯಮಂತ್ರಿಗಳ ಸಚಿವಾಲಯ ಮತ್ತು ರಾಜಭವನದಿಂದ 100 ಮೀಟರ್ ದೂರದಲ್ಲಿರುವ ನೂಪಿ ಲಾಲ್ ಕಾಂಪ್ಲೆಕ್ಸ್‌ನಲ್ಲಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಮಹಿಳೆಯರು ಸಿಎಂ ರಾಜೀನಾಮೆ ನೀಡದಂತೆ ಆಗ್ರಹಿಸಿದರು. 

ಮುಖ್ಯಮಂತ್ರಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ದಟ್ಟವಾಗಿದೆ ಎಂದು ಹೇಳಲಾಗುತ್ತಿದೆ. ಮೊನ್ನೆ ಗುರುವಾರ ರಾಜ್ಯದಲ್ಲಿ ಮತ್ತೆ ಹಿಂಸಾಚಾರ ಸಂಭವಿಸಿ ಮೂರು ಜನರು ಮೃತಪಟ್ಟು 5 ಮಂದಿ ಗಾಯಗೊಂಡ ನಂತರ ರಾಜೀನಾಮೆ ನೀಡಲು ಹೆಚ್ಚು ಇಂಗಿತ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ. 

ಇದಕ್ಕೆ ಮಹಿಳೆಯರು ಮುಖ್ಯಮಂತ್ರಿಗಳ ಪರವಾಗಿ ನಿಂತಿದ್ದು, ಈ ಸಂದಿಗ್ಧ ಘಟ್ಟದಲ್ಲಿ ಬಿರೇನ್ ಸಿಂಗ್ ಸರ್ಕಾರ ದೃಢವಾಗಿ ನಿಂತು ತೊಂದರೆ ಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮಹಿಳಾ ಮುಖಂಡರಾದ ಕ್ಷೇತ್ರಿಮಯುಮ್ ಶಾಂತಿ ಹೇಳಿದರು.
ಕಾಂಗ್‌ಪೊಕ್ಪಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಶಂಕಿತ ಗಲಭೆಕೋರರ ನಡುವಿನ ಗುಂಡಿನ ಚಕಮಕಿಯಲ್ಲಿ ಮೃತಪಟ್ಟವರ ಸಂಖ್ಯೆ ಇಂದು ಮೂರಕ್ಕೇರಿದೆ. 

ಪ್ರತಿಭಟನೆ ನಡೆಸಿದ ಮಹಿಳೆಯರು ಪೊಲೀಸರು ಬೇಕಾದರೆ ತಮ್ಮನ್ನು ಬಂಧಿಸಲಿ ಎಂದು ಸವಾಲು ಹಾಕಿದರಲ್ಲದೆ ಪೊಲೀಸರ ಚಲನವಲನವನ್ನು ತಡೆಯಲು ರಸ್ತೆಯ ಮಧ್ಯದಲ್ಲಿ ಟೈರ್‌ಗಳನ್ನು ಸುಟ್ಟುಹಾಕಿದರು. 

ಭದ್ರತಾ ಸಿಬ್ಬಂದಿ ಅವರನ್ನು ಸಿಎಂ ಅವರ ನಿವಾಸಕ್ಕೆ ಮೆರವಣಿಗೆ ಮಾಡುವುದನ್ನು ತಡೆಯುತ್ತಿದ್ದಂತೆ, ರವಣಿಗೆಯಲ್ಲಿದ್ದವರು ಹಿಂಸಾಚಾರಕ್ಕೆ ತಿರುಗಿದರು, ಪೊಲೀಸರು ಅಶ್ರುವಾಯು ಶೆಲ್‌ಗಳನ್ನು ಬಳಸಿದರು. ಗುಂಪನ್ನು ಚದುರಿಸಲು ಲಾಠಿ ಚಾರ್ಜ್ ನಡೆಸಬೇಕಾಯಿತು. 

ಈಶಾನ್ಯ ರಾಜ್ಯದಲ್ಲಿ ಇದುವರೆಗೆ ಮೈಟೆಯಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 100 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮಣಿಪುರದ ಜನಸಂಖ್ಯೆಯ ಶೇಕಡ 53 ರಷ್ಟಿರುವ ಮೈಟೈಗಳು ಇಂಫಾಲ್ ಕಣಿವೆಯಲ್ಲಿ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಬುಡಕಟ್ಟು ಜನಾಂಗದವರು, ನಾಗಾಗಳು ಮತ್ತು ಕುಕಿಗಳು ಜನಸಂಖ್ಯೆಯ ಶೇಕಡಾ 40 ರಷ್ಟಿದ್ದು ಗುಡ್ಡಗಾಡು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ.

SCROLL FOR NEXT