ದೇಶ

ಬಿಬಿಸಿ ಭಾರತದ ಕಾನೂನು ಅನುಸರಿಸಬೇಕು: ಬ್ರಿಟನ್​ ವಿದೇಶಾಂಗ ಸಚಿವರಿಗೆ ಜೈಶಂಕರ್ ಖಡಕ್ ಉತ್ತರ

Lingaraj Badiger

ನವದೆಹಲಿ: ಜಿ20 ವಿದೇಶಾಂಗ ಸಚಿವರ ಸಭೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಆಗಮಿಸಿರುವ ಬ್ರಿಟನ್​ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ ಅವರು ಬುಧವಾರ ದೆಹಲಿಯಲ್ಲಿ ನಡೆದ ದ್ವಿಪಕ್ಷೀಯ ಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ಭಾರತದಲ್ಲಿ ಬಿಬಿಸಿ ಕಚೇರಿಗಳ ಮೇಲೆ ನಡೆದ ಐಟಿ ದಾಳಿಯ ಬಗ್ಗೆ ಪ್ರಸ್ತಾಪಿಸಿದ್ದಾರೆ.

ದ್ವಿಪಕ್ಷೀಯ ಸಭೆಯಲ್ಲಿ ಕ್ಲೆವರ್ಲಿ ಅವರು ಬಿಬಿಸಿ ಮೇಲಿನ ಐಟಿ ದಾಳಿಯನ್ನು ಜಾಣತನದಿಂದ ಪ್ರಸ್ತಾಪಿಸಿದ್ದಾರೆ. ಇದಕ್ಕೆ ಖಡಕ್ ಆಗಿ ಉತ್ತರಿಸಿದ ಜೈಶಂಕರ್‌ ಅವರು "ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸಂಸ್ಥೆಗಳು ಈ ನೆಲದ ಕಾನೂನನ್ನು ಅನುಸರಿಸಬೇಕು ಎಂದು ಹೇಳಿದ್ದಾರೆ ಎನ್ನಲಾಗಿದೆ.

ಈ ವರ್ಷದ ಫೆಬ್ರವರಿಯಲ್ಲಿ, ಆದಾಯ ತೆರಿಗೆ ಅಧಿಕಾರಿಗಳು ನವದೆಹಲಿ ಮತ್ತು ಮುಂಬೈನಲ್ಲಿರುವ ಬ್ರಿಟಿಷ್ ಬ್ರಾಡ್‌ಕಾಸ್ಟರ್‌ನ ಕಚೇರಿಗಳಲ್ಲಿ ತೀವ್ರ ಶೋಧ ನಡೆಸಿದ್ದರು.

ವಿಶೇಷ ಸಂದರ್ಶನದಲ್ಲಿ ಎಎನ್ಐ ಜತೆ ಮಾತನಾಡಿದ ಜೇಮ್ಸ್ ಕ್ಲೆವರ್ಲಿ ಅವರು, ಬಿಬಿಸಿ ಒಂದು ಸ್ವತಂತ್ರ ಸಂಸ್ಥೆಯಾಗಿದೆ ಮತ್ತು UK ಸರ್ಕಾರಕ್ಕೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಬುದ್ಧಿವಂತಿಕೆಯಿಂದ ಹೇಳಿದ್ದಾರೆ.

ಇನ್ನು ಪ್ರಧಾನಿ ಮೋದಿ ಕುರಿತು ಸಾಕ್ಷ್ಯ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಜೇಮ್ಸ್ ಕ್ಲೆವರ್ಲಿ, "ನಾನು ಸಾಕ್ಷ್ಯಚಿತ್ರವನ್ನು ನೋಡಿಲ್ಲ ಆದರೆ ಯುಕೆ ಮತ್ತು ಭಾರತದಲ್ಲಿ ಅದಕ್ಕೆ ಬಂದ ಪ್ರತಿಕ್ರಿಯೆಗಳನ್ನು ನೋಡಿದ್ದೇನೆ. ಬಿಬಿಸಿ ಒಂದು ಸ್ವತಂತ್ರ ಸಂಸ್ಥೆ ಮತ್ತು ಸರ್ಕಾರದಿಂದ ಪ್ರತ್ಯೇಕವಾಗಿದೆ. ನಾನು ಡಾ. ಜೈಶಂಕರ್ ಅವರೊಂದಿಗೆ ಉತ್ತಮವಾದ ವೈಯಕ್ತಿಕ ಸಂಬಂಧವನ್ನು ಹೊಂದಿದ್ದೇನೆ... ಯುಕೆ-ಭಾರತದ ನಡುವಿನ ಸಂಬಂಧವು ಬಲವಾಗಿ ಬೆಳೆಯುತ್ತಿದೆ ಎಂದು ಹೇಳಿದ್ದಾರೆ.

ನಾಳೆ ನಡೆಯಲಿರುವ ಜಿ20 ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸುವ ಸಲುವಾಗಿ ಜೇಮ್ಸ್‌ ಭಾರತಕ್ಕೆ ಆಗಮಿಸಿದ್ದು, ಇಂದು ನಡೆದ ಮಾತುಕತೆಯಲ್ಲಿ ಬಿಬಿಸಿ ವಿಷಯ ಪ್ರಸ್ತಾಪಿಸಿದ್ದಾರೆ.

SCROLL FOR NEXT