ನವದೆಹಲಿ: ಸಿಬಿಐ ಪಕ್ಷದ ಹಿರಿಯ ನಾಯಕ ಮನೀಶ್ ಸಿಸೋಡಿಯಾ ಅವರಿಗೆ ಚಿತ್ರಹಿಂಸೆ ನೀಡುತ್ತಿದೆ ಮತ್ತು ಸುಳ್ಳು ಆರೋಪಗಳನ್ನು ಒಳಗೊಂಡಿರುವ ಪತ್ರಗಳಿಗೆ ಸಹಿ ಹಾಕುವಂತೆ ಒತ್ತಡ ಹೇರುತ್ತಿದೆ ಎಂದು ಎಎಪಿ ರಾಷ್ಟ್ರೀಯ ವಕ್ತಾರ ಸೌರಭ್ ಭಾರದ್ವಾಜ್ ಭಾನುವಾರ ಹೇಳಿದ್ದಾರೆ.
ಫೆಡರಲ್ ತನಿಖಾ ಸಂಸ್ಥೆಯು ಫೆಬ್ರುವರಿ 26 ರಂದು ದೆಹಲಿ ಅಬಕಾರಿ ನೀತಿ ಪ್ರಕರಣದ ತನಿಖೆಗೆ ಸಹಕರಿಸದ ಮತ್ತು ತನಿಖಾಧಿಕಾರಿಗಳ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುವ ಆರೋಪದ ಮೇಲೆ ಸಿಸೋಡಿಯಾ ಅವರನ್ನು ಬಂಧಿಸಿತು.
ಸಿಬಿಐ ವಿಶೇಷ ನ್ಯಾಯಾಲಯವು ಶನಿವಾರ ಸಿಸೋಡಿಯಾ ಅವರ ಕಸ್ಟಡಿಯನ್ನು ಮಾರ್ಚ್ 6 ರವರೆಗೆ ವಿಸ್ತರಿಸಿದೆ. ಫೆಬ್ರುವರಿ 28 ರಂದು, ಸಿಸೋಡಿಯಾ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸಂಪುಟಕ್ಕೆ ರಾಜೀನಾಮೆ ನೀಡಿದರು.
ಅಧಿಕಾರಿಗಳ ಪ್ರಕಾರ, ಅಬಕಾರಿ ನೀತಿಯ ಕುರಿತು ತಜ್ಞರ ಸಮಿತಿಯ ಶಿಫಾರಸುಗಳ ಕುರಿತಾದ ಕಾನೂನು ಅಭಿಪ್ರಾಯಗಳನ್ನು ಒಳಗೊಂಡಿರುವ ನಾಪತ್ತೆಯಾದ ನಿರ್ಣಾಯಕ ಫೈಲ್ ಅನ್ನು ಪತ್ತೆಹಚ್ಚಲು ಸಂಸ್ಥೆಯು ಸಿಸೋಡಿಯಾ ಅವರ ಕಸ್ಟಡಿಯನ್ನು ಬಳಸಿಕೊಳ್ಳಲು ಬಯಸಿದೆ. ಆದರೆ, ಅದು ಈಗಲೂ ಪತ್ತೆಯಾಗಿಲ್ಲ ಎಂದಿದ್ದಾರೆ.
ಇದನ್ನೂ ಓದಿ: ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಸಿಬಿಐ ಕಸ್ಟಡಿ ಇನ್ನೆರಡು ದಿನ ವಿಸ್ತರಿಸಿ ನ್ಯಾಯಾಲಯ ಆದೇಶ
'ಮನೀಶ್ ಸಿಸೋಡಿಯಾ ಅವರಿಗೆ ಸಿಬಿಐ ಚಿತ್ರಹಿಂಸೆ ನೀಡುತ್ತಿದೆ ಮತ್ತು ಅವರ ವಿರುದ್ಧ ಸುಳ್ಳು ಆರೋಪಗಳನ್ನು ಹೊಂದಿರುವ ದಾಖಲೆಗಳಿಗೆ ಸಹಿ ಹಾಕುವಂತೆ ಒತ್ತಡ ಹೇರಲಾಗುತ್ತಿದೆ. ಸಿಸೋಡಿಯಾ ವಿರುದ್ಧ ಸಿಬಿಐ ಬಳಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಯಾವುದೇ ಪುರಾವೆಗಳು ಕಾಣೆಯಾಗಿದೆ ಎಂದು ಅವರು ಎಂದಿಗೂ ಉಲ್ಲೇಖಿಸಿಲ್ಲ. ಸಿಸೋಡಿಯಾ ನಿವಾಸದ ಮೇಲೆ ದಾಳಿ ನಡೆಸಿದರು. ಆದರೆ ಏನೂ ಕಂಡುಬಂದಿಲ್ಲ' ಎಂದು ಭಾರದ್ವಾಜ್ ಭಾನುವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಐದು ದಿನಗಳ ಸಿಬಿಐ ಕಸ್ಟಡಿ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಶನಿವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದಾಗ ಸಿಸೋಡಿಯಾ ಅವರು, 'ಎಂಟರಿಂದ ಒಂಬತ್ತು ಗಂಟೆಗಳ ಕಾಲ ಕುಳಿತುಕೊಂಡು ಮತ್ತೆ ಮತ್ತೆ ಅದೇ ಪ್ರಶ್ನೆಗಳಿಗೆ ಉತ್ತರಿಸುತ್ತಿರುವುದಾಗಿ ತಿಳಿಸಿದರು ಮತ್ತು ಇದನ್ನು 'ಮಾನಸಿಕ ಕಿರುಕುಳ' ಎಂದು ಬಣ್ಣಿಸಿದರು.
ಇದಕ್ಕೆ, ಕಳೆದ ವಿಚಾರಣೆಯಲ್ಲಿ ಆರೋಪಿಗಳ ಮೇಲೆ ಥರ್ಡ್ ಡಿಗ್ರಿ ಬಳಸದಂತೆ ಸಿಬಿಐಗೆ ನಿರ್ದೇಶನ ನೀಡಿದ್ದ ನ್ಯಾಯಾಧೀಶರು, 'ಮತ್ತೆ ಮತ್ತೆ ಅದೇ ಪ್ರಶ್ನೆಗಳನ್ನು' ಕೇಳಬೇಡಿ. ಹೊಸದೇನಾದರೂ ಇದ್ದರೆ ಅವರನ್ನು ಕೇಳಿ ಎಂದು ತನಿಖಾ ಸಂಸ್ಥೆಗೆ ಸೂಚಿಸಿದರು.