ದೇಶ

ನಿಧಿ ದುರುಪಯೋಗ ಪ್ರಕರಣ: ಸಾಕೇತ್ ಗೋಖಲೆ ಜಾಮೀನು ಅರ್ಜಿ ಕುರಿತು ಗುಜರಾತ್ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ

Manjula VN

ನವದೆಹಲಿ: ಕ್ರೌಡ್ ಫಂಡಿಂಗ್ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪದ ಪ್ರಕರಣದಲ್ಲಿ ಜಾಮೀನು ಕೋರಿ ತೃಣಮೂಲ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಗುಜರಾತ್ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೋಮವಾರ ನೋಟಿಸ್ ಜಾರಿ ಮಾಡಿದೆ.

ನಿಧಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ನಿರಾಕರಿಸಿದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ, ಸಾಕೇತ್ ಗೋಖಲೆ ಸಲ್ಲಿಸಿದ್ದ ಮೇಲ್ಮನವಿ ಸಲ್ಲಿಸಿದ್ದರು.

ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಇಂದು ಗುಜರಾತ್ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದ್ದು, ಎರಡು ವಾರಗಳಲ್ಲಿ ಪ್ರತಿಕ್ರಿಯೆ ನೀಡುವಂತೆ ಆದೇಶಿಸಿದೆ. ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ವಿಕ್ರಮ್ ನಾಥ್ ಅವರಿದ್ದ ಸೂಚನೆ ನೀಡಿದೆ. ಅರ್ಜಿ ಸಂಬಂಧ ಗೋಖಲೆ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದ ಮಂಡಿಸಿದ್ದರು.

ಆನ್‌ಲೈನ್‌ ಅಭಿಯಾನ (ಕ್ರೌಡ್ ಫಂಡಿಂಗ್)ದ ಮೂಲಕ ಸಂಗ್ರಹಿಸಿದ ಹಣವನ್ನು ದುರುಪಯೋಗಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಖಲೆ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ವಜಾಗೊಳಿಸಿತ್ತು. ಗೋಖಲೆ ಅವರ ವಿರುದ್ಧ ಮೇಲ್ನೋಟದ ಅಪರಾಧ ಕಂಡು ಬಂದಿರುವುದಾಗಿ ಹೈಕೋರ್ಟ್‌ ತಿಳಿಸಿತ್ತು.

ಸಾಕ್ಷಿಗಳ ಹೇಳಿಕೆಗಳ ಪ್ರಕಾರ, ಅವರು ದೂರುದಾರರ ಪತ್ನಿಯಿಂದ ಮಾತ್ರವಲ್ಲದೆ 1,767 ವ್ಯಕ್ತಿಗಳಿಂದ ಹಣ ಪಡೆದಿದ್ದಾರೆ. ಸಾಮಾಜಿಕ ಮಾಧ್ಯಮ ಬಳಸಿಕೊಂಡು ಈ ಮೊತ್ತ ಸಂಗ್ರಹಿಸಲಾಗಿದ್ದು ಹೆಚ್ಚಿನ ವಹಿವಾಟುಗಳು ಆನ್‌ಲೈನ್‌ ಮೂಲಕ ನಡೆದಿವೆ ಎಂದು ಅದು ಹೇಳಿತ್ತು.

ಗೋಖಲೆ ಅವರು ಆರಂಭಿಸಿದ್ದ ಕ್ರೌಡ್‌ಫಂಡಿಂಗ್‌ಗೆ ತಮ್ಮ ಪತ್ನಿ ಸ್ವಲ್ಪ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದರು. ಆದರೆ, ಈ ಹಣ ಬಡವರ ಕಲ್ಯಾಣಕ್ಕೆ ಬಳಕೆಯಾಗದೆ, ಗೋಖಲೆ ಅವರ ವೈಯಕ್ತಿಕ ಖರ್ಚಿಗೆ ಬಳಕೆಯಾಗಿದೆ ಎಂದು ರಾಜ್ಯ ಸರ್ಕಾರದ ಉಪ ಕಾರ್ಯದರ್ಶಿಯೊಬ್ಬರು ದೂರಿದ್ದರು. ಆದರೆ, ರಾಜಕೀಯ ದ್ವೇಷದ ಕಾರಣಕ್ಕೆ ತನ್ನ ವಿರುದ್ಧ ದೂರು ನೀಡಲಾಗಿದೆ. ಜೈಲಿನಲ್ಲಿಡಲು ಸರ್ಕಾರ ಬಯಸಿದ್ದರಿಂದ ಪ್ರಕರಣದಲ್ಲಿ ತನ್ನನ್ನು ಬಂಧಿಸಲಾಗಿದೆ ಎಂದು ಗೋಖಲೆ ಆರೋಪಿಸಿದ್ದರು.

SCROLL FOR NEXT