ನವದೆಹಲಿ: ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ತೆಲುಗಿನ 'RRR' ಚಿತ್ರದ ನಾಟು ನಾಟು ಹಾಡು ಮತ್ತು ತಮಿಳಿನ ಸಾಕ್ಷ್ಯಚಿತ್ರ ' ದಿ ಎಲಿಫೆಂಟ್ ವಿಸ್ಪರರ್ಸ್ ಚಿತ್ರತಂಡವನ್ನು ರಾಜ್ಯಸಭೆಯಲ್ಲಿ ಪಕ್ಷ ಬೇಧ ಮರೆತು ಮಂಗಳವಾರ ಅಭಿನಂದಿಸಲಾಯಿತು.
ಕಲಾಪ ಆರಂಭವಾಗುತ್ತಿದ್ದಂತೆ, ಸಭಾಪತಿ ಜಗದೀಪ್ ಧನ್ ಕರ್, ಉತ್ತಮ ಮೂಲ ಗೀತೆ ವಿಭಾಗದಲ್ಲಿ ನಾಟು ನಾಟು ಹಾಡು ಮತ್ತು' ದಿ ಎಲಿಫೆಂಟ್ ವಿಸ್ಪರರ್ಸ್ 'ಸಾಕ್ಷ್ಯಚಿತ್ರ ಆಸ್ಕರ್ ಪ್ರಶಸ್ತಿ ಪಡೆದಿರುವುದು ,ಭಾರತದ ಚಿತ್ರಗಳಿಗೆ ಹೊಸ ಮನ್ನಣೆಯನ್ನು ಸೂಚಿಸುತ್ತವೆ ಎಂದರು.
ಸದನದ ನಾಯಕ ಪಿಯೂಷ್ ಗೋಯೆಲ್ ಮಾತನಾಡಿ, ದಿ ಎಲಿಫೆಂಟ್ ವಿಸ್ಪರರ್ಸ್ ಸಾಕ್ಷ್ಯಚಿತ್ರವನ್ನು ಇಬ್ಬರು ಶ್ರೇಷ್ಠ ಮಹಿಳೆಯರು ತಯಾರಿಸಿದ್ದಾರೆ. ಇದು ಲಿಂಗಕ್ಕೆ ಸಂಬಂಧಿಸಿದೆ. ಇದು ನಮ್ಮ ಭಾರತದ ಮಹಿಳೆಯರಿಗೆ ಗೌರವವಾಗಿದೆ. ಇದು ಭಾರತದ ಮಹಿಳೆಯರಿಗೆ ದೊರೆತ ಮನ್ನಣೆಯ ದೊಡ್ಡ ಗುರುತು ಎಂದು ಶ್ಲಾಘಿಸಿದರು.
ಇದನ್ನೂ ಓದಿ: 'RRR ಬ್ಯಾನ್ ಮಾಡಿ ಅಂದಿದ್ದ ವಿಸ್ವ ಗುರುವಿನ ಶಿಷ್ಯರು ಎಲ್ ಮಕ್ಕಾಡೆ ಮಲ್ಕೊಂಡವ್ರೆ ನೋಡ್ರಾಪ್ಪಾ': ಪ್ರಕಾಶ್ ರಾಜ್ ಲೇವಡಿ
ಪ್ರತಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಅಧ್ಯಕ್ಷ ಎಂ.ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ದಕ್ಷಿಣ ಭಾರತದ ಎರಡು ಸಿನಿಮಾಗಳಿಗೆ ಪ್ರಶಸ್ತಿ ಲಭಿಸಿರುವುದು ಹೆಮ್ಮೆಯ ಸಂಗತಿ. ಆದರೆ, ಆಸ್ಕರ್ ಗೆಲುವಿನ ಕ್ರೆಡಿಟ್ ನ್ನು ಬಿಜೆಪಿ ಮೋದಿಗೆ ನೀಡಬಾರದು ಎಂದು ಹಾಸ್ಯ ಚಟಾಕಿ ಹಾರಿಸಿದರು.
ನಾವು ನಿರ್ದೇಶಿಸಿದ್ದೇವೆ, ಸಾಂಗ್ ಬರೆದಿದ್ದೇವೆ, ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷ ಕ್ರೆಡಿಟ್ ತೆಗೆದುಕೊಳ್ಳಬಾರದು, ಅದು ನನ್ನ ಮನವಿ ಮಾತ್ರ ಅನ್ನಬಾರದು. ಇದು ದೇಶದ ಕೊಡುಗೆ ಎಂದರು. ಮಲ್ಲಿಕಾರ್ಜುನ ಖರ್ಗೆ ಅವರ ಮಾತನ್ನು ಸಭಾಪತಿಯವರು ಕಡತದಿಂದ ತೆಗೆಯಬಾರದು ಎಂದು ಜೈರಾಮ್ ರಮೇಶ್ ಹೇಳಿದರು.