ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ದೆಹಲಿಯ ಬಜೆಟ್ ಅನ್ನು ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ. ಮಂಗಳವಾರ ನಿಗದಿಯಾಗಿದ್ದ ದೆಹಲಿ ಸರ್ಕಾರದ 2023-24ರ ಬಜೆಟ್ನ ಮಂಡನೆಯನ್ನು ತಡೆಹಿಡಿಯಲಾಗಿದೆ.
ದೆಹಲಿ ವಿಧಾನಸಭೆಯ ಬಜೆಟ್ ಅಧಿವೇಶನವು ಮಾರ್ಚ್ 17 ರಂದು ಪ್ರಾರಂಭವಾಗಿದೆ. ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಬಂಧನದ ನಂತರ ಹಣಕಾಸು ಖಾತೆಯನ್ನು ವಹಿಸಿಕೊಂಡಿರುವ ಕೈಲಾಶ್ ಗೆಹ್ಲೋಟ್ ಅವರು ಬಜೆಟ್ ಮಂಡಿಸಬೇಕಿತ್ತು. ಮಾರ್ಚ್ 10 ರಂದು ಬಜೆಟ್ ಅನ್ನು ಅನುಮೋದನೆಗಾಗಿ ಕಳುಹಿಸಲಾಗಿದೆ. ಆದರೆ, ಗೃಹ ಸಚಿವಾಲಯ ಕೆಲವು ಕಳವಳಗಳನ್ನು ವ್ಯಕ್ತಪಡಿಸಿ, ಅನುಮೋದನೆ ನೀಡಲು ನಿರಾಕರಿಸಿದೆ.
'ಕಳೆದ 75 ವರ್ಷಗಳಲ್ಲಿ ರಾಜ್ಯವೊಂದರ ಬಜೆಟ್ ಸ್ಥಗಿತಗೊಂಡಿರುವುದು ಇದೇ ಮೊದಲು. ದೆಹಲಿಯವರಿಗೆ ಏಕೆ ಅಸಮಾಧಾನ?. ದಯವಿಟ್ಟು ದೆಹಲಿಯ ಬಜೆಟ್ ಅನ್ನು ಸ್ಥಗಿತಗೊಳಿಸಬೇಡಿ. ದೆಹಲಿಯ ಜನರು ತಮ್ಮ ಬಜೆಟ್ ಅನ್ನು ಅಂಗೀಕರಿಸುವಂತೆ ಕೈ ಜೋಡಿಸಿ ಒತ್ತಾಯಿಸುತ್ತಾರೆ' ಎಂದು ದೆಹಲಿ ಮುಖ್ಯಮಂತ್ರಿ ಪತ್ರದಲ್ಲಿ ತಿಳಿಸಿದ್ದಾರೆ.
ಸೋಮವಾರ ಖಾಸಗಿ ಚಾನೆಲ್ವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ ಕೇಜ್ರಿವಾಲ್, ಕೇಂದ್ರವು 'ಗೂಂಡಾಗಿರಿ' ಮಾಡುತ್ತಿದೆ ಮತ್ತು ಸರ್ಕಾರದ ಬಜೆಟ್ ಅನ್ನು ತಡೆಹಿಡಿಯುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು ಎಂದು ಹೇಳಿದರು.
ಅವರ ಭಾಷಣದ ವಿಡಿಯೋ ತುಣುಕನ್ನು ಆಮ್ ಆದ್ಮಿ ಪಕ್ಷ (ಎಎಪಿ) ಟ್ವೀಟ್ ಮಾಡಿದೆ.
ಇದನ್ನೂ ಓದಿ: ಹಿರಣ್ಯ ಕಶಿಪುವಿನಂತೆ ಇಂದಿಗೂ ಕೆಲವರು ತಮ್ಮನ್ನು ತಾವು ದೇವರೆಂದು ಪರಿಗಣಿಸುತ್ತಿದ್ದಾರೆ: ಅರವಿಂದ ಕೇಜ್ರಿವಾಲ್
ಟ್ವಿಟರ್ನಲ್ಲಿ ಅರವಿಂದ ಕೇಜ್ರಿವಾಲ್ ಕೂಡ ತಲಾದಾಯದ ಹೆಚ್ಚಳದ ಕುರಿತು ಸುದ್ದಿ ವರದಿಯನ್ನು ಹಂಚಿಕೊಂಡಿದ್ದು, 'ಪ್ರತಿದಿನ ಎದುರಾಗುವ ಎಲ್ಲಾ ಅಡೆತಡೆಗಳ ಹೊರತಾಗಿಯೂ ದೆಹಲಿಯು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಅಂತಹ ಅಡೆತಡೆಗಳನ್ನು ಸೃಷ್ಟಿಸದಿದ್ದರೆ ಮತ್ತು ಎಲ್ಲಾ ಸರ್ಕಾರಗಳು (ಕೇಂದ್ರ ಮತ್ತು ರಾಜ್ಯ) ಜನರ ಕಲ್ಯಾಣಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ್ದರೆ ಆಗುತ್ತಿದ್ದ ಅಭಿವೃದ್ಧಿಯನ್ನು ಊಹಿಸಿ. ಆಗ ದೆಹಲಿಯು ಅನೇಕ ಪಟ್ಟು ವೇಗವಾಗಿ ಬೆಳೆಯುತ್ತದೆ' ಎಂದಿದ್ದಾರೆ.
ಗೃಹ ವ್ಯವಹಾರಗಳ ಸಚಿವಾಲಯ (ಎಂಎಚ್ಎ) ಬಜೆಟ್ಗೆ ಅನುಮೋದನೆ ನೀಡಿಲ್ಲ. ಹೀಗಾಗಿ ಮಂಗಳವಾರ ನಿಗದಿಯಾಗಿದ್ದಂತೆ ದೆಹಲಿ ವಿಧಾನಸಭೆಯಲ್ಲಿ ಬಜೆಟ್ ಅನ್ನು ಮಂಡಿಸಲಾಗುವುದಿಲ್ಲ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಮುಖ್ಯಮಂತ್ರಿ ಕೇಜ್ರಿವಾಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಂತೆ, ಸಚಿವಾಲಯವು ಆಪ್ ಸರ್ಕಾರದಿಂದ ಸ್ಪಷ್ಟೀಕರಣವನ್ನು ಕೇಳಿದೆ ಎಂದು ಎಂಎಚ್ಎ ಮೂಲಗಳು ತಿಳಿಸಿವೆ. ಏಕೆಂದರೆ, ಅದರ ಬಜೆಟ್ ಪ್ರಸ್ತಾವನೆಯು ಜಾಹೀರಾತಿಗಾಗಿ ಹೆಚ್ಚಿನ ಅನುದಾನ ಹಂಚಿಕೆ ಮತ್ತು ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ಕ್ರಮಗಳಿಗೆ ತುಲನಾತ್ಮಕವಾಗಿ ಕಡಿಮೆ ಹಣವನ್ನು ಹೊಂದಿದೆ.