ದೇಶ

ನಟ ನವಾಜುದ್ದೀನ್ ಸಿದ್ದಿಕಿ, ಅವರ ಮಾಜಿ ಪತ್ನಿ, ಇಬ್ಬರು ಅಪ್ರಾಪ್ತ ಮಕ್ಕಳಿಗೆ ನ್ಯಾಯಾಲಯದೆದುರು ಹಾಜರಾಗುವಂತೆ ಹೈಕೋರ್ಟ್ ಸೂಚನೆ

Ramyashree GN

ಮುಂಬೈ: ಬಾಂಬೆ ಹೈಕೋರ್ಟ್ ಗುರುವಾರ ಮಕ್ಕಳ ಸಲುವಾಗಿ ತಮ್ಮ ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸುವ ಸಾಧ್ಯತೆಯನ್ನು ಅನ್ವೇಷಿಸಲು ನಟ ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಮಾಜಿ ಪತ್ನಿ ಜೈನಾಬ್ ಸಿದ್ದಿಕಿ ಹಾಗೂ ಅವರ ಇಬ್ಬರು ಅಪ್ರಾಪ್ತ ಮಕ್ಕಳೊಂದಿಗೆ ಏಪ್ರಿಲ್ 3 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳಾದ ರೇವತಿ ಮೋಹಿತೆ ಡೇರೆ ಮತ್ತು ಶರ್ಮಿಳಾ ದೇಶಮುಖ್ ಅವರನ್ನೊಳಗೊಂಡ ವಿಭಾಗೀಯ ಪೀಠವು, 12 ವರ್ಷದ ಮಗಳು ಮತ್ತು 7 ವರ್ಷ ವಯಸ್ಸಿನ ಮಗ ಎಲ್ಲಿದ್ದಾರೆ ಎಂಬುದನ್ನು ಬಹಿರಂಗಪಡಿಸಲು ತನ್ನ ಮಾಜಿ ಪತ್ನಿಗೆ ನಿರ್ದೇಶನ ನೀಡುವಂತೆ ಕೋರಿ ನಟ ಸಲ್ಲಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯ ವಿಚಾರಣೆ ನಡೆಸುತ್ತಿದೆ.

'ತನಗೆ ತಿಳಿಸದೆ ತನ್ನ ಹೆಂಡತಿ ಮಕ್ಕಳನ್ನು ದುಬೈನಿಂದ ಭಾರತಕ್ಕೆ ಕರೆತಂದಿದ್ದಾಳೆ ಮತ್ತು ಅವರು ಶಾಲೆಗೆ ಹೋಗದ ಕಾರಣ ಅವರ ಶಿಕ್ಷಣದ ಮೇಲೆ ಪರಿಣಾಮ ಉಂಟಾಗುತ್ತಿದೆ' ಎಂದು ನಟ ದೂರಿದ್ದಾರೆ.

ಗುರುವಾರ ಪೀಠವು, ನಟ ಹಾಗೂ ಅವರ ಮಾಜಿ ಪತ್ನಿ ತಮ್ಮ ಇಬ್ಬರು ಮಕ್ಕಳೊಂದಿಗೆ ಕ್ಯಾಮೆರಾದಲ್ಲಿ ವಿಚಾರಣೆಗಾಗಿ ನ್ಯಾಯಾಧೀಶರ ಕೊಠಡಿಯಲ್ಲಿ ಏಪ್ರಿಲ್ 3 ರಂದು ಹಾಜರಾಗುವಂತೆ ಕೇಳಿದೆ.

'ನಾವು ಮಕ್ಕಳ ಬಗ್ಗೆ ಕಾಳಜಿ ವಹಿಸುತ್ತೇವೆ. ಸೌಹಾರ್ದಯುತ ಇತ್ಯರ್ಥದ ಸಾಧ್ಯತೆಯನ್ನು ಅನ್ವೇಷಿಸೋಣ' ಎಂದು ನ್ಯಾಯಾಲಯ ಹೇಳಿದೆ.

ನವಾಜುದ್ದೀನ್ ಸಿದ್ದಿಕಿ ಅವರ ವಕೀಲ ಅದ್ನಾನ್ ಶೇಖ್ ಅವರು, ಈ ಹಿಂದೆ ಹೈಕೋರ್ಟ್ ನಿರ್ದೇಶನದಂತೆ ನಾವು ಪ್ರಸ್ತಾವಿತ ಒಪ್ಪಿಗೆಯ ನಿಯಮಗಳನ್ನು ಕಳುಹಿಸಿದ್ದೇವೆ. ಆರು ದಿನ ಕಳೆದರೂ ಉತ್ತರ ಬಂದಿಲ್ಲ. ಈ ವಿಷಯವನ್ನು ಇತ್ಯರ್ಥಪಡಿಸಲು ಅವರು ಬಯಸದಿರಬಹುದು ಎಂದು ಪೀಠಕ್ಕೆ ತಿಳಿಸಿದರು.

ಜೈನಾಬ್ ಪರವಾಗಿ ವಾದ ಮಂಡಿಸಿದ ವಕೀಲ ಚೈತನ್ಯ ಪುರಂಕರ್, ಜೈನಾಬ್ ಅವರು ಕೂಡ ಈ ವಿಷಯವನ್ನು ಇತ್ಯರ್ಥಪಡಿಸಲು ಬಯಸುತ್ತಾರೆ ಎಂದು ವಾದಿಸಿದರು.

SCROLL FOR NEXT