ಮುಂಬೈ: ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ ನಾಯಕ ಶರದ್ ಪವಾರ್ ಉದ್ಧವ್ ಠಾಕ್ರೆ ಬಗ್ಗೆ ಮಾತನಾಡಿದ್ದು, ಉದ್ಧವ್ ಠಾಕ್ರೆ ಹೋರಾಡದೆಯೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು ಎಂದು ಹೇಳಿದ್ದಾರೆ.
ಮಂಗಳವಾರದಂದು ಶರದ್ ಪವಾರ್ ಅವರ ಆತ್ಮಚರಿತ್ರೆ ಪುಸ್ತಕದ ಪರಿಷ್ಕೃತ ಆವೃತ್ತಿ ಬಿಡುಗಡೆಯಾಗಿದ್ದು, ಈ ಪುಸ್ತಕದಲ್ಲಿ ಉದ್ಧವ್ ಠಾಕ್ರೆ ಬಗ್ಗೆ ಪವಾರ್ ಮಾತನಾಡಿದ್ದಾರೆ.
ಪಕ್ಷದೊಳಗಿನ ಅಸಮಾಧಾನವನ್ನು ಸರಿಪಡಿಸುವಲ್ಲಿ ಸಿಎಂ ಆಗಿದ್ದ ಉದ್ಧವ್ ಠಾಕ್ರೆ ವಿಫಲರಾದರು ಹಾಗೂ ಯಾವುದೇ ಹೋರಾಟವನ್ನೂ ನಡೆಸದೇ ಸಿಎಂ ಹುದ್ದೆಗೆ ರಾಜೀನಾಮೆ ನೀಡಿದರು ಎಂದು ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಒಬ್ಬ ಮುಖ್ಯಮಂತ್ರಿಯಾಗಿ ಅಗತ್ಯವಿರುವ ರಾಜಕೀಯ ಚತುರತೆ ಉದ್ಧವ್ ಠಾಕ್ರೆಗೆ ಕಡಿಮೆ ಎಂದೂ ಹೇಳಿರುವ ಪವಾರ್, ಎಂವಿಎ ರಚನೆ ಕೇವಲ ಒಂದು ಅಧಿಕಾರದ ಆಟವಾಗಿರಲಿಲ್ಲ. ಆದರೆ ಮತ್ತೊಂದು ರಾಜಕೀಯ ಪಕ್ಷವನ್ನು ಹೇಗಾದರೂ ಸರಿ ನಿರ್ನಾಮ ಮಾಡುವ ಬಿಜೆಪಿಯ ಪ್ರವೃತ್ತಿಗೆ ಪ್ರತಿಯಾದ ಅಸ್ತ್ರವಾಗಿತ್ತು ಎಂದೂ ಪವಾರ್ ಪುಸ್ತಕದಲ್ಲಿ ಹೇಳಿದ್ದಾರೆ.
ಎಂವಿಎ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆಯುತ್ತದೆ ಎಂಬುದು ನಿರೀಕ್ಷಿತವೇ ಆಗಿದ್ದರೂ ಅದು ಉದ್ಧವ್ ಠಾಕ್ರೆ ಸಿಎಂ ಆಗುವ ಮೂಲಕ ಶಿವಸೇನೆಯಲ್ಲೇ ಒಡಕು ಉಂಟಾಗುತ್ತದೆ ಎಂದು ನಿರೀಕ್ಷಿಸಿರಲಿಲ್ಲ ಎಂದು ಪವಾರ್ ಹೇಳಿದ್ದಾರೆ.