ಇಂಫಾಲ: ನನ್ನ ರಾಜ್ಯ ಮಣಿಪುರ ಹಿಂಸಾಚಾರದಿಂದ ಹೊತ್ತಿ ಉರಿಯುತ್ತಿದ್ದು, ದಯವಿಟ್ಟು ಸಹಾಯ ಮಾಡಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮಹಿಳಾ ಬಾಕ್ಸರ್ ಮೇರಿ ಕೋಮ್ ಅವರು ಗುರುವಾರ ಮನವಿ ಮಾಡಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅವರು, ಮಣಿಪುರದ ಪರಿಸ್ಥಿತಿ ಸರಿಯಿಲ್ಲ. ನಿನ್ನೆ ರಾತ್ರಿಯಿಂದ ಪರಿಸ್ಥಿತಿ ಹದಗೆಟ್ಟಿದೆ. ರಾಜ್ಯದಲ್ಲಿ ಪರಿಸ್ಥಿತಿ ಮತ್ತು ಶಾಂತಿ, ಭದ್ರತೆಯನ್ನು ಕಾಪಾಡುವ ಕುರಿತು ಕ್ರಮಗಳ ಕೈಗೊಳ್ಳುವಂತೆ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳುತ್ತಿದ್ದೇನೆ. ಈ ಹಿಂಸಾಚಾರದಲ್ಲಿ ಕೆಲವರು ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿರುವುದು ದುರಾದೃಷ್ಟಕರ ಸಂಗತಿ. ಈ ಪರಿಸ್ಥಿತಿಯು ಶೀಘ್ರಗತಿಯಲ್ಲಿ ಸಹಜ ಸ್ಥಿತಿಗೆ ಮರಳಬೇಕೆಂದು ಹೇಳಿದ್ದಾರೆ.
ಈ ನಡುವೆ ಮಣಿಪುರ ಹಿಂಸಾಚಾರ ಕುರಿತು ಪ್ರತಿಕ್ರಿಯೆ ನೀಡಿರುವ ಮಣಿಪುರ ಸಿಎಂ ಬಿರೇನ್ ಸಿಂಗ್ ಅವರು, ಹಿಂಸಾಚಾರದಲ್ಲಿ "ಅಮೂಲ್ಯ ಜೀವಗಳು ಹೋಗಿವೆ. ಈ ಘಟನೆಯು "ಸಮಾಜದ ಎರಡು ವರ್ಗಗಳ ನಡುವಿನ ತಪ್ಪು ತಿಳುವಳಿಕೆಯ ಪರಿಣಾಮವಾಗಿದೆ" ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರದಲ್ಲಿ ಹಿಂಸಾಚಾರ: 8 ಜಿಲ್ಲೆಗಳಲ್ಲಿ ಕರ್ಫ್ಯೂ ಜಾರಿ, ಪರಿಸ್ಥಿತಿ ನಿಯಂತ್ರಣಕ್ಕೆ ಸೇನೆ, ಅಸ್ಸಾಂ ರೈಫಲ್ಸ್'ಗೆ ಬುಲಾವ್!
ಕಳೆದ 24 ಗಂಟೆಗಳಲ್ಲಿ, ಇಂಫಾಲ್, ಬಿಷ್ಣುಪುರ್ ಮತ್ತು ಮೋರೆ ಇತ್ಯಾದಿಗಳಲ್ಲಿ ಕೆಲವು ಘರ್ಷಣೆಗಳು, ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಇದರಿಂದ ಆಸ್ತಿ-ಪಾಸ್ತಿ, ಮನೆಯ ಹಾನಿಯ ಜೊತೆಗೆ ಅಮೂಲ್ಯವಾದ ಜೀವಗಳು ಹೋಗಿವೆ, ಇದು ತುಂಬಾ ದುರದೃಷ್ಟಕರ ವಿಚಾರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.