ಬೆನೌಲಿಮ್(ಗೋವಾ): ಗಡಿಯಾಚೆಗಿನ ಭಯೋತ್ಪಾದನೆ ಒಳಗೊಂಡಂತೆ ಎಲ್ಲಾ ರೂಪಗಳಲ್ಲಿ ಬೆದರಿಕೆಯನ್ನು ನಿಲ್ಲಿಸಬೇಕು ಎಂದು ಪಾಕಿಸ್ತಾನವನ್ನು ಸ್ಪಷ್ಟವಾಗಿ ಉಲ್ಲೇಖಿಸಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್, ಭಯೋತ್ಪಾದನೆಯನ್ನು ದೃಢವಾಗಿ ಎದುರಿಸಲು ಶಾಂಘೈ ಸಹಕಾರ ಸಂಘಟನೆ (ScO)ಗೆ ಶುಕ್ರವಾರ ಕರೆ ನೀಡಿದ್ದಾರೆ.
ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ-ಜರ್ದಾರಿ, ಚೀನಾದ ಕ್ವಿನ್ ಗ್ಯಾಂಗ್ ಮತ್ತು ರಷ್ಯಾದ ಸೆರ್ಗೆ ಲಾವ್ರೊವ್ ಸಮ್ಮುಖದಲ್ಲಿ ಜೈಶಂಕರ್ ಅವರು ಇಂದು ಎಸ್ ಸಿಒ ಸಮಾವೇಶದಲ್ಲಿ, ಭಯೋತ್ಪಾದನೆ ಸಮಸ್ಯೆಯನ್ನು ಕಡೆಗಣಿಸಿದರೆ ದೇಶದ ಭದ್ರತಾ ಹಿತಾಸಕ್ತಿಗಳಿಗೆ ಹಾನಿಯುಂಟಾಗುತ್ತದೆ ಎಂದಿದ್ದಾರೆ.
ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವುದನ್ನು ಕಟ್ಟುನಿಟ್ಟಿನ ಕ್ರಮದಿಂದ ನಿಲ್ಲಿಸಬೇಕು ಎಂದು ವಿದೇಶಾಂಗ ಸಚಿವರು ಸಭೆಯಲ್ಲಿ ಒತ್ತಾಯಿಸಿದರು.
ಇದನ್ನೂ ಓದಿ: ನಮಸ್ಕಾರ ಭಾರತ! ಶಾಂತಿ, ಶಾಂತಿ: SCO ಸಭೆಗಾಗಿ ವಾಘಾ ಗಡಿ ಮೂಲಕ ಪಾಕಿಸ್ತಾನಿ ಪತ್ರಕರ್ತರ ನಿಯೋಗ ಭಾರತಕ್ಕೆ ಆಗಮನ!
ಕೋವಿಡ್ -19 ಸಾಂಕ್ರಾಮಿಕ ಮತ್ತು ಅದರಿಂದಾದ ಸಮಸ್ಯೆಗಳನ್ನು, ತೊಂದರೆಗಳನ್ನು ಎದುರಿಸುವಲ್ಲಿ ಜಗತ್ತು ತೊಡಗಿರುವಾಗ, ಭಯೋತ್ಪಾದನೆಯ ಬೆದರಿಕೆಯು ಅಡೆತಡೆಯಿಲ್ಲದೆ ಮುಂದುವರಿಯುತ್ತಿದೆ. ಭಯೋತ್ಪಾದನೆ ಕುಕೃತ್ಯಗಳಿಗೆ ಯಾವುದೇ ಸಮರ್ಥನೆಯಿಲ್ಲ ಎಂದು ನಾವು ದೃಢವಾಗಿ ನಂಬುತ್ತೇವೆ. ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಅದರ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿ ಅದನ್ನು ನಿಲ್ಲಿಸಬೇಕು. ಭಯೋತ್ಪಾದನೆಯನ್ನು ಎದುರಿಸುವುದು ಶಾಂಘೈ ಸಹಕಾರ ಸಂಘಟನೆಯ ಮೂಲ ಆದೇಶಗಳಲ್ಲಿ ಒಂದಾಗಿದೆ ಎಂದರು.