ದೇಶ

ದಿ ಕೇರಳ ಸ್ಟೋರಿ: ನಿಷೇಧ ಹೇರಿದ ದೀದಿಗೆ ಯುಪಿ ಸಿಎಂ ಯೋಗಿ ಸಡ್ಡು, ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ

Srinivasamurthy VN

ಲಖನೌ: ತೀವ್ರ ವಿವಾದಕ್ಕೆ ಗ್ರಾಸವಾಗಿರುವ ದಿ ಕೇರಳ ಸ್ಟೋರಿ ಚಿತ್ರ ಪ್ರದರ್ಶನಕ್ಕೆ ಪಶ್ಚಿಮ ಬಂಗಾಳದ ಸರ್ಕಾರ ನಿಷೇಧ ಹೇರಿದ ಬೆನ್ನಲ್ಲೇ ಇದಕ್ಕೆ ಸಡ್ಡು ಹೊಡೆದಿರುವ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ್ ಸರ್ಕಾರ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಣೆ ಮಾಡಿದೆ.

ಉತ್ತರ ಪ್ರದೇಶದ ಬಿಜೆಪಿ ಸರ್ಕಾರವು ಕೇರಳ ಸ್ಟೋರಿ ಚಿತ್ರವನ್ನು ತೆರಿಗೆ ಮುಕ್ತಗೊಳಿಸಲಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳವಾರ ಘೋಷಿಸಿದ್ದಾರೆ. ರಾಜ್ಯದಲ್ಲಿ ಚಿತ್ರಕ್ಕೆ ತೆರಿಗೆ ಮುಕ್ತ ಸ್ಥಾನಮಾನ ನೀಡುವುದಾಗಿ ಮಧ್ಯಪ್ರದೇಶ ಸರ್ಕಾರ ಹೇಳಿದ ಕೆಲವೇ ದಿನಗಳಲ್ಲಿ ಸಿಎಂ ಯೋಗಿ ಆದಿತ್ಯಾನಾಥ್ ಈ ಘೋಷಣೆ ಮಾಡಿದ್ದಾರೆ. 

"ದಿ ಕೇರಳ ಸ್ಟೋರಿ ಚಿತ್ರವನ್ನು ಉತ್ತರ ಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗುವುದು" ಎಂದು ಆದಿತ್ಯನಾಥ್ ತಮ್ಮ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದ್ದಾರೆ. ಇದೇ ವಿಚಾರವಾಗಿ ಮಾಹಿತಿ ನೀಡಿರುವ ನಿರ್ದೇಶಕ ಮಾಹಿತಿ ಶಿಶಿರ್, ಶುಕ್ರವಾರ ಲಕ್ನೋದಲ್ಲಿ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಚಿತ್ರದ ವಿಶೇಷ ಪ್ರದರ್ಶನಕ್ಕೆ ಹಾಜರಾಗಲಿದ್ದಾರೆ.  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇ 12 ರಂದು ಲಕ್ನೋದಲ್ಲಿ ತಮ್ಮ ಸಂಪುಟದೊಂದಿಗೆ ಚಿತ್ರದ ವಿಶೇಷ ಪ್ರದರ್ಶನವನ್ನು ವೀಕ್ಷಿಸಲಿದ್ದಾರೆ" ಎಂದು ಅವರು ಹೇಳಿದರು.

ಸುದೀಪ್ತೋ ಸೇನ್ ನಿರ್ದೇಶನದ ದಿ ಕೇರಳ ಸ್ಟೋರಿಯು ಕೇರಳದ ಮಹಿಳೆಯರು ಇಸ್ಲಾಂಗೆ ಮತಾಂತರಗೊಳ್ಳಲು ಹೇಗೆ ಒತ್ತಾಯಿಸಲ್ಪಟ್ಟರು ಮತ್ತು ಭಯೋತ್ಪಾದಕ ಗುಂಪು ಇಸ್ಲಾಮಿಕ್ ಸ್ಟೇಟ್‌ನಿಂದ ಹೇಗೆ ನೇಮಕಗೊಂಡರು ಎಂಬುದನ್ನು ಚಿತ್ರಿಸುತ್ತದೆ. ಮೇ 5 ರಂದು ಬಿಡುಗಡೆಯಾದ ಈ ಚಿತ್ರ ದೇಶದಲ್ಲಿ ರಾಜಕೀಯ ಬಿರುಗಾಳಿ ಎಬ್ಬಿಸಿದೆ.

ಚಿತ್ರದ ಬಿಡುಗಡೆಯ ದಿನದಂದು, ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕ ಪಿತೂರಿಗಳನ್ನು ಹೊರತಂದಿದ್ದಕ್ಕಾಗಿ ಚಲನಚಿತ್ರಕ್ಕೆ ಮನ್ನಣೆ ನೀಡಿದ್ದರು ಮತ್ತು ಕರ್ನಾಟಕದಲ್ಲಿ ಚುನಾವಣಾ ರ್ಯಾಲಿಯಲ್ಲಿ ಚಿತ್ರವನ್ನು ಹೊಗಳುತ್ತಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಚಿತ್ರಕ್ಕೆ ನಿಷೇಧದ ಭೀತಿ
ಇನ್ನು ಈ ವಿವಾದಿತ ಚಿತ್ರಕ್ಕೆ ಪಶ್ಚಿಮ ಬಂಗಾಳ ಸರ್ಕಾರ ನಿಷೇಧ ಹೇರಿದೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, “ದ್ವೇಷ ಮತ್ತು ಹಿಂಸಾಚಾರದ ಯಾವುದೇ ಘಟನೆಯನ್ನು” ತಪ್ಪಿಸಲು ರಾಜ್ಯದಲ್ಲಿ ವಿವಾದಾತ್ಮಕ ಚಲನಚಿತ್ರ ದಿ ಕೇರಳ ಸ್ಟೋರಿ ಪ್ರದರ್ಶನವನ್ನು ತಕ್ಷಣವೇ ನಿಷೇಧಿಸುವಂತೆ ಸೋಮವಾರ ಆದೇಶಿಸಿದರು. 

ಅಂತೆಯೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಕಳಪೆ ಸಾರ್ವಜನಿಕ ಪ್ರತಿಕ್ರಿಯೆಯನ್ನು ಉಲ್ಲೇಖಿಸಿ ತಮಿಳುನಾಡಿನಾದ್ಯಂತ ಮಲ್ಟಿಪ್ಲೆಕ್ಸ್‌ಗಳುಈ ಚಿತ್ರದ ಪ್ರದರ್ಶನವನ್ನು ಭಾನುವಾರದಿಂದ ರದ್ದುಗೊಳಿಸಿವೆ. ಇದಕ್ಕೆ ತದ್ವಿರುದ್ಧ ಎಂಬಂತೆ  ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶನಿವಾರ ರಾಜ್ಯದಲ್ಲಿ ಚಿತ್ರಕ್ಕೆ ತೆರಿಗೆ ಮುಕ್ತ ಘೋಷಣೆ ಮಾಡಿದ್ದಾರೆ.

SCROLL FOR NEXT