ನವದೆಹಲಿ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಬಿಜೆಪಿ, ಮುಂಬರುವ ರಾಜಸ್ಥಾನ, ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಗೆ ಕಾರ್ಯತಂತ್ರವನ್ನು ಬದಲಾವಣೆ ಮಾಡಲು ನಿರ್ಧರಿಸಿದೆ.
ವರ್ಷಾಂತ್ಯಕ್ಕೆ ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ, ಛತ್ತೀಸ್ ಗಢದ ಚುನಾವಣೆ ನಡೆಯಲಿದ್ದು, ಈ ಪೈಕಿ ಮಧ್ಯಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಉಳಿದ ರಾಜ್ಯಗಳಲ್ಲಿ ಆಡಳಿತ ವಿರೋಧಿ ಅಲೆಯ ಲಾಭ ಪಡೆಯಲು ಯತ್ನಿಸುತ್ತಿದೆ.
ಪಕ್ಷದ ಹಿರಿಯ ನಾಯಕರು ಈ ಬಗ್ಗೆ ಮಾತನಾಡಿದ್ದು, ಈ ನಾಲ್ಕೂ ರಾಜ್ಯಗಳಲ್ಲಿ ತಂತ್ರಗಾರಿಕೆ ರೂಪಿಸುವ ನಿಟ್ಟಿನಲ್ಲಿ ಜಾತಿ ಲೆಕ್ಕಾಚಾರಗಳನ್ನೂ ಪರಿಗಣಿಸುತ್ತೇವೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ, ಜಗದೀಶ್ ಶೆಟ್ಟರ್ ಹಾಗೂ ಲಕ್ಷ್ಮಣ್ ಸವದಿ ಅವರಿಗೆ ಟಿಕೆಟ್ ತಪ್ಪಿಸಿದ್ದರ ಪರಿಣಾಮ ಲಿಂಗಾಯತರ ಮತಗಳು ಕೈತಪ್ಪಿತ್ತು. ಇದರಿಂದ ಪಕ್ಷ ಪಾಠ ಕಲಿತಿದ್ದು, ಅಗತ್ಯವಿದ್ದಲ್ಲಿ ಸಣ್ಣ ಪಕ್ಷಗಳೊಂದಿಗೂ ಮೈತ್ರಿ ಮಾಡಿಕೊಳ್ಳುವುದರ ಬಗ್ಗೆ ಚಿಂತನೆ ನಡೆಸುತ್ತೇವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಕಟೀಲ್ ಔಟ್; ಬೊಮ್ಮಾಯಿಗೆ ಪ್ರತಿಪಕ್ಷ ನಾಯಕನ ಸ್ಥಾನ ಡೌಟ್; ಬಿಜೆಪಿಯಲ್ಲಿ 'ಸಾರಥಿ'ಗಳ ಬದಲಾವಣೆ!
ಮುಂಬರುವ ಚುನಾವಣೆಗಳನ್ನು ಕೇಂದ್ರ ನಾಯಕರ ಹೆಸರಲ್ಲಿ ನಡೆಸುವುದಕ್ಕಿಂತಲೂ ಸ್ಥಳೀಯ ನಾಯಕತ್ವದ ಮೊರೆ ಹೋಗುವುದು, ಸ್ಥಳೀಯ ನಾಯಕರು ಚುನಾವಣೆಯ ಪ್ರಚಾರದ ರೂಪು ರೇಷೆಗಳ ಜವಾಬ್ದಾರಿಯನ್ನು ಸ್ಥಳೀಯ ನಾಯಕರಿಗೇ ವಹಿಸುವುದರಿಂದ ಕಾಂಗ್ರೆಸ್ ಗೆ ಲಾಭ ಉಂಟಾಗಿದೆ.
ಈ ನಿಟ್ಟಿನಲ್ಲಿ ಬಿಜೆಪಿಯೂ ಬದಲಾವಣೆಗೆ ಮುಂದಾಗುತ್ತಿದ್ದು, ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನೇ ಆಧಾರವಾರಿಗಿರಿಸಿಕೊಂಡು, ನರೇಂದ್ರ ಸಿಂಗ್ ತೋಮರ್, ಬಿಡಿ ಶರ್ಮಾ, ಸಿಂದಿಯಾ ಅವರಂತಹ ಇತರ ನಾಯಕರು ಚುನಾವಣೆಯಲ್ಲಿ ಮುಖ್ಯ ಪಾತ್ರ ವಹಿಸುವ ಸಾಧ್ಯತೆ ಇದೆ.
ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೆ ಅವರಿಗೆ ಪ್ರಾಮುಖ್ಯತೆ ನೀಡುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಲಿದೆ ಇಲ್ಲಿ ಕಿರೋರಿ ಲಾಲ್ ಮೀನಾ, ಗಜೇಂದ್ರ ಸಿಂಗ್ ಶೇಖಾವತ್, ಸತೀಶ್ ಪೂನಿಯಾ ಮತ್ತಿತರರಿಗೂ ಪ್ರಾಮುಖ್ಯತೆ ನೀಡಲಾಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದ್ದರೆ, ಚತ್ತೀಸ್ ಗಢದಲ್ಲಿ ರಮಣ್ ಸಿಂಗ್, ಬ್ರಿಜ್ಮೋಹನ್ ಅಗರವಾಲ್, ಅರುಣ್ ಸಾವೊ, ತೆಲಂಗಾಣದಲ್ಲಿ ಬಂಡಿ ಸಂಜಯ್ ರಾಜೇಂದ್ರನ್, ಜಿ ಕಿಶನ್ ರೆಡ್ಡಿ ಪಕ್ಷದ ಪ್ರಮುಖ ಮುಖಗಳಾಗಲಿದ್ದಾರೆ.