ನವದೆಹಲಿ: ಕರ್ನಾಟಕದಲ್ಲಿ ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿರುವುದು ಕಾಂಗ್ರೆಸ್ ವರಿಷ್ಠರಿಗೆ ತಲೆ ನೋವಾಗಿ ಪರಿಣಮಿಸಿದೆ. ಈ ಮಧ್ಯೆ ನಿನ್ನೆ ದೆಹಲಿಯಿಂದ ಆಗಮಿಸಿದ್ದ ಮೂವರು ವೀಕ್ಷಕರು ಶಾಸಕರ ಅಭಿಪ್ರಾಯ ಸಂಗ್ರಹಿಸಿದ್ದು, ಇಂದು ಮಧ್ಯಾಹ್ನ ನವದೆಹಲಿಗೆ ಆಗಮಿಸಿದರು.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್ ಕುಮಾರ್ ಶಿಂಧೆ, ದೀಪಕ್ ಬವಾರಿಯಾ ಮತ್ತು ಬನ್ವಾರ್ ಜಿತೇಂದ್ರ ಸಿಂಗ್ ಅವರನ್ನೊಳಗೊಂಡ ತಂಡ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದತ್ತ ತೆರಳುತ್ತಿದ್ದು, ಅಲ್ಲಿ ಅವರಿಗೆ ವರದಿ ಸಲ್ಲಿಸಲಿದೆ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬನ್ವಾರ್ ಜಿತೇಂದ್ರ ಸಿಂಗ್, ಕಳೆದ ರಾತ್ರಿ ಶಾಸಕರೊಂದಿಗೆ ನಾಲ್ಕೈದು ಗಂಟೆಗಳ ಕಾಲ ಚರ್ಚೆ ನಡೆಸಿ, ಅವರ ಅಭಿಪ್ರಾಯ ಸಂಗ್ರಹಿಸಲಾಗಿದೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನಮ್ಮ ವರದಿ ಸಲ್ಲಿಸುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ: ಸಿಎಂ ಕುರ್ಚಿಗೆ ಸಿದ್ದು v/s ಡಿಕೆಶಿ ಫೈಟ್; ಅಧಿಕಾರ ಹಂಚಿಕೆಗೆ ಸಿದ್ದರಾಮಯ್ಯ ಒಪ್ಪಿಗೆ, ಯಾರಿಗೆ ಎಷ್ಟು ವರ್ಷ ಪಟ್ಟ?
ಇಂದು ರಾತ್ರಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಿಗೆ ವೀಕ್ಷಕರು ವರದಿ ಸಲ್ಲಿಸಲಿದ್ದು, ಶೀಘ್ರದಲ್ಲಿಯೇ ಸರ್ಕಾರ ರಚನೆಯಾಗಲಿದೆ ಎಂದು ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೀವಾಲಾ ತಿಳಿಸಿದ್ದಾರೆ.