ದೇಶ

ಕೇಂದ್ರದಿಂದ ವಿಶೇಷ ಕಾನೂನು: ದೆಹಲಿ ಆಡಳಿತಾತ್ಮಕ ನಿರ್ಧಾರಕ್ಕೆ ಪ್ರಾಧಿಕಾರ, ಲೆ.ಗೌರ್ನರ್ ತೀರ್ಮಾನ ಅಂತಿಮ!

Srinivas Rao BV

ನವದೆಹಲಿ: ದೆಹಲಿಯಲ್ಲಿ ಚುನಾಯಿತ ಸರ್ಕಾರಕ್ಕೆ ಆಡಳಿತಾತ್ಮಕ ಅಧಿಕಾರ ಇರಬೇಕು ಎಂಬ ಸುಪ್ರೀಂ ಕೋರ್ಟ್ ಆದೇಶ ಹೊರಬಂದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಮಹತ್ವದ ಕಾನೂನನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದಿದೆ. 
 
ವಿಶೇಷ ಕಾನೂನು ಇದಾಗಿದ್ದು, ಈ ಕಾನೂನು ಅಧಿಕಾರಿಗಳ ವರ್ಗಾವಣೆ ಹಾಗೂ ನಿಯಂತ್ರದ ಅಂತಿಮ ನಿರ್ಧಾರವನ್ನು ಲೆಫ್ಟಿನೆಂಟ್ ಗೌರ್ನರ್ ಗೇ ನೀಡುವಂಥಹದ್ದಾಗಿದೆ.

ಸುಗ್ರೀವಾಜ್ಞೆ ಮೂಲಕ ಈ ಕಾನೂನನ್ನು ಜಾರಿಗೊಳಿಸಲಾಗಿದ್ದು, ಅಧಿಕಾರಿಗಳ ವರ್ಗಾವಣೆ ಹಾಗೂ ನಿಯೋಜನೆಯನ್ನು ನಿರ್ಧರಿಸುವುದಕ್ಕೆ ರಾಷ್ಟ್ರೀಯ ರಾಜಧಾನಿ ನಾಗರಿಕ ಸೇವೆಗಳ ಪ್ರಾಧಿಕಾರವನ್ನು ರಚಿಸಿದ್ದು, ಇದರಲ್ಲಿ ಸಿಎಂ ಅಧ್ಯಕ್ಷರಾಗಿರಲಿದ್ದು, ಸದಸ್ಯರಾಗಿ ಮುಖ್ಯಕಾರ್ಯದರ್ಶಿ ಹಾಗೂ ಪ್ರಧಾನ ಗೃಹ ಕಾರ್ಯದರ್ಶಿ ಅವರು ಇರಲಿದ್ದಾರೆ.

ಪ್ರಾಧಿಕಾರವು ಯಾವುದೇ ವಿಷಯವನ್ನು ನಿರ್ಧರಿಸಬೇಕಾದರೂ ಹಾಜರಿರುವ ಮತ್ತು ಮತ ಚಲಾಯಿಸುವ ಸದಸ್ಯರ ಬಹುಮತ ನಿರ್ಣಾಯಕವಾಗಿರಲಿದ್ದು, ಭಿನ್ನಾಭಿಪ್ರಾಯವಿದ್ದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ತೀರ್ಮಾನವೇ ಅಂತಿಮವಾಗಿರಲಿದೆ.

ದೆಹಲಿ ಸರ್ಕಾರ ಕಾನೂನು ಮತ್ತು ಸುವ್ಯವಸ್ಥೆ, ಭೂಮಿ ಹೊರತುಪಡಿಸಿ ಇತರೆ ಸೇವೆಗಳ ಮೇಲೆ ಅಧಿಕಾರ ಹೊಂದಬಹುದು ಎಂದು ಸುಪ್ರೀಂ ಕೋರ್ಟ್ ಮೇ 11 ರಂದು​ ತೀರ್ಪು ಪ್ರಕಟಿಸಿತ್ತು.

ಸಂಸತ್ತಿನ ಉಭಯ ಸದನಗಳಲ್ಲಿ ಸುಗ್ರೀವಾಜ್ಞೆ ಅಂಗೀಕಾರವಾಗಬೇಕಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆಯಿದೆ, ಈ ವಿಷಯದ ಬಗ್ಗೆ ವಿರೋಧ ಪಕ್ಷಗಳು ಒಟ್ಟಾಗಿ ಸೇರಬಹುದು.

SCROLL FOR NEXT