ದೇಶ

ಪ್ರತಿಪಕ್ಷಗಳ ಒಗ್ಗಟ್ಟಿಗೆ ಪ್ರಯತ್ನ: ಅರವಿಂದ್ ಕೇಜ್ರಿವಾಲ್-ನಿತೀಶ್ ಕುಮಾರ್ ಮಹತ್ವದ ಮಾತುಕತೆ

Srinivasamurthy VN

ನವದೆಹಲಿ: ಕಾಂಗ್ರೆಸ್ ‌ಪಕ್ಷಕ್ಕೆ ಕರ್ನಾಟಕದಲ್ಲಿ ಅದ್ಭುತ ಗೆಲುವು ದೊರೆತ ಬೆನ್ನಲ್ಲೇ 2024ರ ಲೋಕಸಭೆ ಚುನಾವಣೆಗೆ ಮೈಕೊಡವಿಕೊಂಡು ಪ್ರತಿಪಕ್ಷಗಳು ಸಿದ್ಥತೆ ನಡೆಸಿದ್ದು, ಅರವಿಂದ್ ಕೇಜ್ರಿವಾಲ್-ನಿತೀಶ್ ಕುಮಾರ್ ಮಹತ್ವದ ಮಾತುಕತೆ ನಡೆಸಿದ್ದಾರೆ.

ಭಾನುವಾರ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ದೆಹಲಿಯ ಅರವಿಂದ್ ಕೇಜ್ರಿವಾಲ್ ಅವರ ನಿವಾಸದಲ್ಲಿ ನಡೆದ ಸಭೆಯಲ್ಲಿ ನಿತೀಶ್ ಅವರ ಜತೆಗೆ ಬಿಹಾರದ ಡಿಸಿಎಂ ತೇಜಸ್ವಿ ಯಾದವ್ ಅವರೂ ಹಾಜರಿದ್ದರು. ಕಳೆದ ಒಂದು ತಿಂಗಳಲ್ಲಿ ನಾಯಕರು ಪರಸ್ಪರ ಎರಡನೇ ಬಾರಿಗೆ ಮಾತುಕತೆ ನಡೆಸುತ್ತಿದ್ದಾರೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಎಎಪಿ ನೇತೃತ್ವದ ಸರ್ಕಾರದ ಪರವಾಗಿ ಸುಪ್ರೀಂ ಕೋರ್ಟ್‌ನ ಆದೇಶವನ್ನು ತಪ್ಪಿಸುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ "ಅಸಂವಿಧಾನಿಕ" ಎಂದು ಕರೆದ ಕೇಜ್ರಿವಾಲ್, ನಿತೀಶ್ ಕುಮಾರ್ ಅವರು ಈ ವಿಷಯದ ಬಗ್ಗೆ "ಸಂಪೂರ್ಣ ಬೆಂಬಲ" ನೀಡಿದ್ದಾರೆ ಮತ್ತು ಅವರು ಒಟ್ಟಾಗಿ ಹೋರಾಡುತ್ತೇವೆ ಎಂದು ಹೇಳಿದರು. ದೆಹಲಿಗೆ ಕೇಂದ್ರ ಸರ್ಕಾರ ಮಾಡಿರುವ ಅನ್ಯಾಯದ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಬಿಜೆಪಿಯೇತರ ವಿರೋಧ ಪಕ್ಷಗಳೆಲ್ಲ ಒಗ್ಗೂಡಿದರೆ ರಾಜ್ಯಸಭೆಯಲ್ಲಿ ವಿಧೇಯಕ ರೂಪದಲ್ಲಿ ಸುಗ್ರೀವಾಜ್ಞೆಯನ್ನು ಸೋಲಿಸಬಹುದು ಎಂದು ಮನವಿ ಮಾಡಿದ್ದೇನೆ. ಮೇಲ್ಮನೆಯಲ್ಲಿ ಈ ನಡೆಯನ್ನು ಸೋಲಿಸಿದರೆ ಅದು ಸೆಮಿಫೈನಲ್ ಆಗಲಿದೆ. 2024ರಲ್ಲಿ ಬಿಜೆಪಿಗೆ ಮರಳಲು ಸಾಧ್ಯವಿಲ್ಲ ಎಂಬ ಸಂದೇಶ ದೇಶಾದ್ಯಂತ ಹೋಗಲಿದೆ ಎಂದರು.

ಇದೇ ವೇಳೆ ಮಾತನಾಡಿದ ನಿತೀಶ್ ಕುಮಾರ್ ಕೇಂದ್ರ ಸರ್ಕಾದ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾಯಿತ ಸರ್ಕಾರದಿಂದ ಅಧಿಕಾರವನ್ನು ಹೇಗೆ ಕಸಿದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದ ಅವರು, 'ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಕೆಲಸ ಮಾಡುವ ಹಕ್ಕನ್ನು ನೀಡಿದೆ, ಅದನ್ನು ನೀವು ಹೇಗೆ ಕಸಿದುಕೊಳ್ಳುತ್ತೀರಿ? ಇದು ಆಶ್ಚರ್ಯಕರವಾಗಿದೆ. ನಾವು ಅವರೊಂದಿಗಿದ್ದೇವೆ (ಎಎಪಿ) ಮತ್ತು ಹೆಚ್ಚಿನ ಸಭೆಗಳನ್ನು ನಡೆಸುತ್ತೇವೆ. ಆದಷ್ಟು ವಿರೋಧ ಪಕ್ಷಗಳನ್ನು ಒಗ್ಗೂಡಿಸಿ ರಾಷ್ಟ್ರವ್ಯಾಪಿ ಅಭಿಯಾನ ನಡೆಸಲು ಪ್ರಯತ್ನಿಸುತ್ತಿದ್ದೇವೆ, ಕಾನೂನು ಸುವ್ಯವಸ್ಥೆ ಅನುಸರಿಸಬೇಕು ಮತ್ತು ಜನರ ನಡುವೆ ಸಾಮರಸ್ಯ ಇರಬೇಕು ಎಂದು ಹೇಳಿದರು.

ಸಂಯುಕ್ತ ಜನತಾದಳದ ನಾಯಕರೂ ಆಗಿರುವ ಬಿಹಾರ ಸಿಎಂ ನಿತೀಶ್ ಕುಮಾರ್ ಅವರು 2024ರ ಲೋಕಸಭೆ ಚುನಾವಣೆಗೆ ಬಿಜೆಪಿಯ ವಿರುದ್ಧ ಪ್ರತಿಪಕ್ಷಗಳ ಒಕ್ಕೂಟ ರಚಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಹಲವು ನಾಯಕರನ್ನು ಭೇಟಿ ಮಾಡಿ, ಮಾತುಕತೆ ನಡೆಸುತ್ತಿದ್ದಾರೆ.

SCROLL FOR NEXT