ದೇಶ

ಪ್ರಧಾನಿ ಹುದ್ದೆ ಆಕಾಂಕ್ಷಿಗಳಿಂದ ರಾಜಕೀಯ ಪ್ರವಾಸ ಆರಂಭ: ಕೇಜ್ರಿವಾಲ್-ಮಮತಾ ಭೇಟಿಗೆ ಬಿಜೆಪಿ ಟಾಂಗ್

Lingaraj Badiger

ಕೋಲ್ಕತ್ತಾ: 2024 ರ ಲೋಕಸಭೆ ಚುನಾವಣೆಗೆ ಮುಂಚಿತವಾಗಿ ಪ್ರಧಾನ ಹುದ್ದೆಯ ಆಕಾಂಕ್ಷಿಗಳ "ರಾಜಕೀಯ ಪ್ರವಾಸೋದ್ಯಮ" ಆರಂಭವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಭೇಟಿಯನ್ನು ಬಿಜೆಪಿ ಟೀಕಿಸಿದೆ.

ಮುಂದಿನ ವರ್ಷ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿ ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಬರುವುದರಿಂದ ಈ "ಪ್ರಧಾನಿ ಹುದ್ದೆಯ ಆಕಾಂಕ್ಷಿಗಳ" ಕನಸು ನನಸಾಗುವುದಿಲ್ಲ ಎಂದು ಕೇಸರಿ ಪಕ್ಷ ತಿರುಗೇಟು ನೀಡಿದೆ.

2024ರ ಲೋಕಸಭೆ ಚುನಾವಣೆಗೆ ಮುನ್ನ ವಿರೋಧ ಪಕ್ಷದ ಪಾಳಯದಿಂದ ಪ್ರಧಾನಿ ಹುದ್ದೆಯ ಹಲವು ಆಕಾಂಕ್ಷಿಗಳ ರಾಜಕೀಯ ಪ್ರವಾಸ ಆರಂಭವಾಗಿದೆ. ಆದರೆ ಸಾರ್ವಜನಿಕರ ಹಣದ ವೆಚ್ಚದ ಈ ರಾಜಕೀಯ ಪ್ರವಾಸವು ಯಾವುದೇ ಫಲಿತಾಂಶವನ್ನು ನೀಡುವುದಿಲ್ಲ. ಏಕೆಂದರೆ 2024ಕ್ಕೂ ಪ್ರಧಾನಿ ಹುದ್ದೆ ಖಾಲಿ ಇಲ್ಲ" ಎಂದು ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.

2014 ಮತ್ತು 2019ರಲ್ಲಿ ಮೈತ್ರಿ ಮಾಡಿಕೊಳ್ಳುವ ಪ್ರಯತ್ನ ವಿಫಲವಾಗಿದೆ. ಈಗ ಒಗ್ಗಟ್ಟು ಮೂಡಿಸಲು ಇಬ್ಬರು ಹಿರಿಯ ನಾಯಕರ ನಡುವೆ ನಡೆದ ಸಭೆ ವ್ಯರ್ಥ ಕಸರತ್ತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಹೇಳಿದ್ದಾರೆ.

ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನಗೊಂಡಿರುವ ಕೇಜ್ರಿವಾಲ್ ಅವರು ಇಂದು ಕೋಲ್ಕತ್ತಾದಲ್ಲಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರನ್ನು ಭೇಟಿ ಮಾಡಿದ್ದಾರೆ.

SCROLL FOR NEXT