ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಂತೆ ನೂತನ ಸಂಸತ್ ಭವನ ನಿರ್ಮಿಸಲಾಗಿದೆ ಎಂಬ ಕಾರಣಕ್ಕೆ ವಿರೋಧ ಪಕ್ಷಗಳು ಅದರ ಉದ್ಘಾಟನೆಯನ್ನು ಬಹಿಷ್ಕರಿಸಲು ನಿರ್ಧರಿಸಿವೆ ಎಂದು ಬಿಜೆಪಿ ಗುರುವಾರ ಆರೋಪಿಸಿದೆ.
ಹೊಸ ಕಟ್ಟಡ ಭಾರತದ ಹೆಮ್ಮೆಯ ಸಂಕೇತವಾಗಿದೆ ಎಂದು ಹೇಳಿರುವ ಬಿಜೆಪಿಯ ಹಿರಿಯ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, ಮೇ 28 ರಂದು 'ಐತಿಹಾಸಿಕ ಉದ್ಘಾಟನೆಯ ದಿನದಂದು ಪ್ರತಿಪಕ್ಷಗಳು ಹೃದಯ ವೈಶಾಲ್ಯತೆ ತೋರಿಸುವ ಮೂಲಕ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು.
"ನಾವೆಲ್ಲರೂ ರಾಷ್ಟ್ರಪತಿಗಳನ್ನು ಗೌರವಿಸುತ್ತೇವೆ, ಅವರ ಬಗ್ಗೆ ಕಾಂಗ್ರೆಸ್ ಹೇಳಿದ್ದನ್ನು ನೆನಪಿಸಿಕೊಳ್ಳುವ ಮೂಲಕ ರಾಷ್ಟ್ರಪತಿ ಹುದ್ದೆಯನ್ನು ಯಾವುದೇ ವಿವಾದಕ್ಕೆ ಎಳೆಯಲು ಬಯಸುವುದಿಲ್ಲ. ಆದರೆ ಭಾರತದ ಪ್ರಧಾನಿ ಕೂಡ ಸಂಸತ್ತಿನ ಪ್ರಮುಖ ಭಾಗವಾಗಿದ್ದಾರೆ. ಪ್ರಧಾನಿ ಕೂಡ ಸಾಂವಿಧಾನಿಕ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಇದನ್ನೂ ಓದಿ: ನೂತನ ಸಂಸತ್ ಕಟ್ಟಡ ವಿವಾದ: ರಾಷ್ಟ್ರಪತಿಯೇ ಉದ್ಘಾಟಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಕೆ
ಕಾರ್ಯಕ್ರಮ ಬಹಿಷ್ಕಾರವನ್ನು ಪ್ರತಿಪಕ್ಷಗಳ ಒಗ್ಗಟ್ಟಿನ ವೇದಿಕೆಯಾಗಿ ಬಳಸಬೇಡಿ ಎಂದು ವಿಪಕ್ಷ ನಾಯಕರನ್ನು ಒತ್ತಾಯಿಸಿದ ಪ್ರಸಾದ್, ಹಾಗೆ ಮಾಡಲು ಅವರಿಗೆ ಹೆಚ್ಚಿನ ಅವಕಾಶಗಳಿವೆ ಎಂದರು.
"ಮೊಘಲರು ಲಾಲ್ ಕ್ವಿಲಾ, ಜಮಾ ಮಸೀದಿ ಮತ್ತು ಹುಮಾಯೂನ್ ಸಮಾಧಿಯನ್ನು ನಿರ್ಮಿಸಿದರು. ಕುತಾಬ್-ಉದ್-ದೀನ್ ಐಬಕ್ ಕುತಾಬ್ ಮಿನಾರ್ ಅನ್ನು ನಿರ್ಮಿಸಿದರು. ರಾಷ್ಟ್ರಪತಿ ಭವನ ಮತ್ತು ಸಂಸತ್ ಭವನ ಎಂದು ಕರೆಯಲ್ಪಡುವ ನಾರ್ತ್ ಬ್ಲಾಕ್, ಸೌತ್ ಬ್ಲಾಕ್, ವೈಸರಾಯ್ ಹೌಸ್ ನ್ನು ಬ್ರಿಟಿಷರು ನಿರ್ಮಿಸಿದರು . ನಾವು 75ವರ್ಷಗಳಲ್ಲಿ ಏನನ್ನು ನಿರ್ಮಿಸಿದ್ದೇವೆ ಎಂದು ಕೇಳಿದ ರವಿಶಂಕರ್ ಪ್ರಸಾದ್, 'ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಭಾರತಕ್ಕೆ ಭಾರತೀಯರೇ ಏಕೆ ಸಂಸತ್ತನ್ನು ನಿರ್ಮಿಸಬಾರದು' ಎಂದರು.
ಹೊಸ ಸಂಸತ್ ಕಟ್ಟಡ ಭಾರತೀಯ ವಾಸ್ತುಶಿಲ್ಪದ 'ಅನುಕರಣೀಯ ಮಾದರಿ' ಮತ್ತು ಇದನ್ನು ಭಾರತೀಯ 'ಸಂಸ್ಕಾರದ ಪ್ರಕಾರ ನಿರ್ಮಿಸಲಾಗಿದೆ. ಕಾರ್ಯಕ್ರಮಕ್ಕೆ ಬಂದು ಪಾಲ್ಗೊಳ್ಳಿ ಎಂದು ಕಾಂಗ್ರೆಸ್ ನಾಯಕರು ಮತ್ತು ಇತರ ವಿರೋಧ ಪಕ್ಷದ ನಾಯಕರಿಗೆ ಹೇಳುತ್ತೇನೆ. ಸಂಸತ್ ದೇಶದ ಪ್ರಜಾಪ್ರಭುತ್ವದ ಕಿರೀಟವಾಗಿದೆ ಎಂದು ಅವರು ಹೇಳಿದರು.