ದೇಶ

Delhi AQI: ಕೃಷಿ ತ್ಯಾಜ್ಯ ದಹನ ತಕ್ಷಣವೇ ನಿಲ್ಲಿಸಲು 4 ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ಸೂಚನೆ 

Srinivas Rao BV

ನವದೆಹಲಿ: ದೆಹಲಿ- ಎನ್ ಸಿಆರ್ ಪ್ರದೇಶದಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ ಕಂಡಿದ್ದು, ಕೃಷಿ ತ್ಯಾಜ್ಯಗಳನ್ನು ಸುಡುವುದನ್ನು ತಕ್ಷಣವೇ ನಿಲ್ಲಿಸುವಂತೆ ಉತ್ತರ ಪ್ರದೇಶ, ರಾಜಸ್ಥಾನ, ಪಂಜಾಬ್, ಹರ್ಯಾಣ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.
 
ನ್ಯಾ. ಸಂಜಯ್ ಕಿಶನ್ ಕೌಲ್, ಸುಧಾಂಶು ಧುಲಿಯಾ ಅವರಿದ್ದ ಪೀಠ ಪ್ರತಿ ವರ್ಷ ದೆಹಲಿ ಈ ರೀತಿಯ ಪರಿಸ್ಥಿತಿಯನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದೆ. ಪ್ರತಿ ಬಾರಿಯೂ ರಾಜಕೀಯ ಸಂಘರ್ಷ ಇರಬಾರದು ಎಂದು ಪಂಜಾಬ್ ಸರ್ಕಾರವನ್ನು ಪ್ರತಿನಿಧಿಸುತ್ತಿದ್ದ ವಕೀಲರಿಗೆ ಸುಪ್ರೀಂ ಕೋರ್ಟ್ ಹೇಳಿದೆ.

ಇದೇ ವೇಳೆ ಬಾಹ್ಯವಾಗಿ ಪುರಸಭೆಯ ಘನ ತ್ಯಾಜ್ಯವನ್ನು ಸುಡದಂತೆ ದೆಹಲಿ ಸರ್ಕಾರಕ್ಕೂ ಕೋರ್ಟ್ ನಿರ್ದೇಶನ ನೀಡಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆಯ ಸಂದರ್ಭದಲ್ಲಿ, ನ್ಯಾಯ ಪೀಠ ಬೆಳೆ ಅವಶೇಷಗಳನ್ನು ಸುಡುವುದು, ವಾಹನ ಮಾಲಿನ್ಯ ಮತ್ತು ತ್ಯಾಜ್ಯವನ್ನು ಬಯಲಿನಲ್ಲಿ ಸುಡುವುದು ಮುಂತಾದ ವಿಷಯಗಳ ವಿರುದ್ಧ ಎಚ್ಚರಿಕೆ ನೀಡಿದ್ದು, ಪ್ರಕರಣದ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿದೆ.

ಸತತ 5  ದಿನಗಳ ತೀವ್ರ ಗಾಳಿಯ ಗುಣಮಟ್ಟ ಕುಸಿತವಾಗುತ್ತಿದ್ದು, ಮಂಗಳವಾರ ಬೆಳಿಗ್ಗೆ ದೆಹಲಿಯಲ್ಲಿ ಮಾಲಿನ್ಯದ ಮಟ್ಟ "ಅತ್ಯಂತ ಕಳಪೆ" ವಿಭಾಗದಲ್ಲಿ ದಾಖಲಿಸಲಾಗಿದೆ.

ಹರ್ಯಾಣ, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ಹಲವಾರು ನಗರಗಳು ಸಹ ಅಪಾಯಕಾರಿ ಗಾಳಿಯ ಗುಣಮಟ್ಟವನ್ನು ವರದಿ ಮಾಡಿದೆ. ಗಾಜಿಯಾಬಾದ್ 338, ಗುರುಗ್ರಾಮ್ 364, ನೋಯ್ಡಾ 348, ಗ್ರೇಟರ್ ನೋಯ್ಡಾ 439 ಮತ್ತು ಫರಿದಾಬಾದ್ 382 ಎಕ್ಯೂಐ ದಾಖಲಿಸಿದೆ.

SCROLL FOR NEXT