ದೇಶ

ಹರಿಯಾಣದಲ್ಲಿ ದುರಂತ: ನಕಲಿ ಮದ್ಯ ಸೇವಿಸಿ 18 ಮಂದಿ ಸಾವು, ಏಳು ಮಂದಿ ಶಂಕಿತರ ಬಂಧನ!

Ramyashree GN

ಚಂಡೀಗಢ: ಹರಿಯಾಣದಲ್ಲಿ ನಕಲಿ ಮದ್ಯ ಸೇವಿಸಿ 18 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯಮುನಾನಗರ ಮತ್ತು ನೆರೆಯ ಅಂಬಾಲಾ ಜಿಲ್ಲೆಯ ಮಂಡೆಬರಿ, ಪಂಜೆಟೊ ಕಾ ಮಜ್ರಾ, ಫೂಸ್‌ಗಢ ಮತ್ತು ಸರನ್ ಗ್ರಾಮಗಳಲ್ಲಿ ನಕಲಿ ಮದ್ಯ ಸೇವಿಸಿ ಸಾವಿಗೀಡಾಗಿದ್ದಾರೆ ಎಂದು ಯಮುನಾನಗರ ಪೊಲೀಸ್ ವರಿಷ್ಠಾಧಿಕಾರಿ ಗಂಗಾ ರಾಮ್ ಪುನಿಯಾ ತಿಳಿಸಿದ್ದಾರೆ.

'ಬುಧವಾರ ಮಧ್ಯಾಹ್ನ, ಮದ್ಯ ಸೇವಿಸಿ ಯುವಕ ಸಾವಿಗೀಡಾಗಿದ್ದಾನೆ ಎಂಬ ಮಾಹಿತಿ ನಮಗೆ ಬಂದಿತು. ಪೊಲೀಸ್ ತಂಡವು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿತು' ಎಂದು ಎಸ್ಪಿ ಐಇಗೆ ತಿಳಿಸಿದರು.

ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ, ಕಳೆದ 24 ಗಂಟೆಗಳಲ್ಲಿ ಯಮುನಾನಗರದಲ್ಲಿ ಆರು ಮಂದಿ ಸಾವಿಗೀಡಾಗಿದ್ದು, ಇದಕ್ಕೂ ಮೊದಲು 10 ಜನರು ಅನುಮಾನಾಸ್ಪದ ಮದ್ಯ ಸೇವಿಸಿ  ಮೃತಪಟ್ಟಿದ್ದಾರೆ. ಈ ಮಧ್ಯೆ, ಅಂಬಾಲಾದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಏಳು ಮಂದಿ ಶಂಕಿತರನ್ನು ಬಂಧಿಸಿದ್ದು, ಇನ್ನಷ್ಟು ಮಂದಿಯನ್ನು ಬಂಧಿಸಲು ದಾಳಿ ನಡೆಸುತ್ತಿದ್ದಾರೆ.

ಬಂಧಿತರಿಂದ ಕಾರ್ಖಾನೆಯೊಂದರಲ್ಲಿ ತಯಾರಿಸಿದ ನಕಲಿ ಮದ್ಯದ 200 ಕ್ರೇಟ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರೊಂದಿಗೆ 14 ಖಾಲಿ ಡ್ರಮ್‌ಗಳು ಹಾಗೂ ಅಕ್ರಮವಾಗಿ ಮದ್ಯ ತಯಾರಿಸಲು ಬಳಸಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಐಪಿಸಿ ಸೆಕ್ಷನ್ 308, 302 (ಕೊಲೆ), 120 ಬಿ (ಅಪರಾಧ ಪಿತೂರಿ) ಮತ್ತು ಪಂಜಾಬ್ ಅಬಕಾರಿ (ಹರಿಯಾಣ ತಿದ್ದುಪಡಿ ಮಸೂದೆ), ಪಂಜಾಬ್ ಅಬಕಾರಿ ಕಾಯ್ದೆ ಮತ್ತು ಹಕ್ಕುಸ್ವಾಮ್ಯ ಕಾಯಿದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪುನಿಯಾ ಹೇಳಿದರು.

ಈಮಧ್ಯೆ, ಅಕ್ರಮ ಮದ್ಯ ಸೇವಿಸಿ ಸಾವಿನ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಪ್ರತಿಪಕ್ಷಗಳು ಭಾರತೀಯ ಜನತಾ ಪಾರ್ಟಿ-ಜನನಾಯಕ ಜನತಾ ಪಾರ್ಟಿ ಮೈತ್ರಿ ಸರ್ಕಾರವನ್ನು ಗುರಿಯಾಗಿಸಿಕೊಂಡು ವಾಗ್ದಾಳಿ ನಡೆಸಿವೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಭೂಪಿಂದರ್ ಸಿಂಗ್ ಹೂಡಾ, 'ಬಿಜೆಪಿ-ಜೆಜೆಪಿ ಸರ್ಕಾರದ ಅಡಿಯಲ್ಲಿ ನಿಷೇಧಿತ ಮಾದಕವಸ್ತು ವ್ಯಾಪಾರ ನಡೆಯುತ್ತಿದೆ. ವಿಷಕಾರಿ ಮದ್ಯ, ಚಿಟ್ಟಾ ಮತ್ತು ಸಿಂಥೆಟಿಕ್ ಡ್ರಗ್ಸ್ ನಿರಂತರವಾಗಿ ರಾಜ್ಯದ ಜನರನ್ನು ಕೊಲ್ಲುತ್ತಿದೆ' ಎಂದು ಆರೋಪಿಸಿದ್ದಾರೆ.

ಆಮ್ ಆದ್ಮಿ ಪಕ್ಷದ ರಾಜ್ಯ ಮುಖ್ಯಸ್ಥ ಮತ್ತು ರಾಜ್ಯಸಭಾ ಸಂಸದ ಸುಶೀಲ್ ಗುಪ್ತಾ, ಪ್ರತಿ ಬೀದಿಯಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಬ್ರಾಂಡೆಡ್ ಬಾಟಲಿಗಳಲ್ಲಿ ನಕಲಿ ಮದ್ಯ ತುಂಬಿಸಿ ಮಾರಾಟ ಮಾಡುವ ದಂಧೆ ರಾಜ್ಯದಲ್ಲಿ ಬಹಿರಂಗವಾಗಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

SCROLL FOR NEXT