ದೇಶ

'ಕಾಶ್ಮೀರ ಬದಲಾಗಿದೆ, ಪ್ರಧಾನಿ ಮೋದಿ ಅಭಿವೃದ್ಧಿ ಕೆಲಸಗಳು ನನ್ನ ಕಣ್ತೆರೆಸಿದೆ': JNU ಮಾಜಿ ನಾಯಕಿ ಶೆಹ್ಲಾ ರಶೀದ್

Vishwanath S

ನವದೆಹಲಿ: ಕಾಶ್ಮೀರ ಕುರಿತಂತೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (JNU)ದ ವಿದ್ಯಾರ್ಥಿ ಸಂಘದ ಮಾಜಿ ನಾಯಕಿ ಶೆಹ್ಲಾ ರಶೀದ್ ಅವರ ಧ್ವನಿ ಈಗ ಬದಲಾಗುತ್ತಿದೆ. ಬಿಜೆಪಿಯನ್ನು ಸದಾ ಟೀಕಿಸುವ ಶೆಹ್ಲಾ, ಕಾಶ್ಮೀರ ಕುರಿತ ಕೇಂದ್ರ ಸರ್ಕಾರದ ನೀತಿಯನ್ನು ಶ್ಲಾಘಿಸಿದ್ದಾರೆ. ಕಣಿವೆಯಲ್ಲಿ ವ್ಯಾಪಕವಾಗಿ ಬದಲಾವಣೆಗಳು ನಡೆಯುತ್ತಿವೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರದ ಕಾಶ್ಮೀರ ನೀತಿಯ ಬಗ್ಗೆ ಇದ್ದಕ್ಕಿದ್ದಂತೆ ಏಕೆ ಹೊಗಳಲು ಪ್ರಾರಂಭಿಸಿದ್ದೀರಿ ಎಂದು ಶೆಹ್ಲಾ ಅವರನ್ನು ಕೇಳಿದಾಗ, ಕಣಿವೆಯಲ್ಲಿ ಅತ್ಯಂತ ಕ್ಷಿಪ್ರ ಬದಲಾವಣೆಯಾಗಿದೆ. ಅದರ ಬಗ್ಗೆ ಸತ್ಯವನ್ನು ಪ್ರಸ್ತುತಪಡಿಸಲು ಸಿದ್ಧ ಎಂದು ಅವರು ಹೇಳಿದರು. ಮೋದಿ ಜೀ ಅವರ ಕೆಲಸದಿಂದಾಗಿ ತನ್ನ ಮನಸ್ಸು ಬದಲಾವಣೆಯಾಗಿದೆ. ಕಾಶ್ಮೀರದಲ್ಲಿ ಕೆಲಸಗಳು ಕಾಣುತ್ತಿವೆ ಎಂದು ಶೆಹ್ಲಾ ಹೇಳಿದರು.

ಪ್ರಧಾನಿ ಮೋದಿ ಒಬ್ಬ ನಿಸ್ವಾರ್ಥ ವ್ಯಕ್ತಿ ಮತ್ತು ಭಾರತಕ್ಕಾಗಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಅವರು ಹೆದರುವುದಿಲ್ಲ ಎಂದು ಶೆಹ್ಲಾ ಹೇಳಿದ್ದಾರೆ. ಪ್ರಧಾನಿ ತಮ್ಮ ವಿರುದ್ಧ ಅನೇಕ ಟೀಕೆಗಳನ್ನು ಎದುರಿಸಿದರು. ಆದರೆ ಅವರು ತಮ್ಮ ಅಭಿವೃದ್ಧಿ ಕಾರ್ಯಗಳಿಂದ ಹಿಂದೆ ಸರಿಯಲಿಲ್ಲ ಎಂದು ಶೆಹ್ಲಾ ಹೇಳಿದರು.

ಶೆಹ್ಲಾ ರಶೀದ್ ಅವರು ಕೇಂದ್ರದ ನೀತಿಗಳಲ್ಲಿ ಯಾವುದೇ ದೋಷವಿಲ್ಲ. ಈ ಬಗ್ಗೆ ಯಾರೊಂದಿಗೂ ಚರ್ಚೆಗೆ ತಾವು ಸಿದ್ಧರಿದ್ದು ಕಣಿವೆಯಲ್ಲಿ ಆಗುತ್ತಿರುವ ಬದಲಾವಣೆಗಳ ಬಗ್ಗೆ ಸತ್ಯವನ್ನು ಹೇಳುತ್ತೇನೆ ಎಂದು ಹೇಳಿದರು. ಎಎನ್‌ಐ ಪಾಡ್‌ಕಾಸ್ಟ್ ಸಮಯದಲ್ಲಿ ಸ್ಮಿತಾ ಪ್ರಕಾಶ್ ಅವರು ಶೆಹ್ಲಾ ರಶೀದ್ ಅವರ ಸಂದರ್ಶನ ನಡೆಸಿದರು.

ಈಗಲೇ ಯಾಕೆ ಕೇಂದ್ರಕ್ಕೆ ಬೆಂಬಲ ನೀಡುತ್ತಿದ್ದೀರಿ ಎಂದು ಕೆಲವರು ಹೇಳುತ್ತಾರೆ. ಹಾಗಾದರೆ ನೀವು ಇನ್ನೂ ಕಾಶ್ಮೀರಕ್ಕೆ ಹೋಗಿಲ್ಲ ಅಂತ ಕಾಣುತ್ತೆ. ದೇಶದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದಲ್ಲ, ಆದರೆ ಈಗ ಕಾಶ್ಮೀರ ನೀತಿ ಉತ್ತಮವಾಗಿದೆ. ಹಾಗಾಗಿ ವಾಸ್ತವಾಂಶಗಳ ಬಗ್ಗೆ ಚರ್ಚೆಗೆ ಜನರನ್ನು ಆಹ್ವಾನಿಸುತ್ತೇನೆ ಎಂದು ಅವರು ಹೇಳಿದರು.

ಶೆಹ್ಲಾ ರಶೀದ್ ಒಬ್ಬ ಸಾಮಾಜಿಕ ಕಾರ್ಯಕರ್ತೆ, ಸಂಶೋಧಕಿ ಮತ್ತು ಶಿಕ್ಷಣತಜ್ಞೆ. 2016ರಲ್ಲಿ ದೇಶದ್ರೋಹದ ಆರೋಪದ ಮೇಲೆ ಬಂಧಿತರಾಗಿದ್ದ ಅಂದಿನ ಜೆಎನ್‌ಯು ಅಧ್ಯಕ್ಷ ಕನ್ಹಯ್ಯಾ ಕುಮಾರ್‌ರನ್ನು ಬಿಡುಗಡೆ ಮಾಡುವಂತೆ ಪ್ರತಿಪಾದಿಸಿದ್ದಕ್ಕಾಗಿ ಶೆಹ್ಲಾ ಖ್ಯಾತಿ ಗಳಿಸಿದ್ದರು. ಇತ್ತೀಚೆಗೆ ಅವರು ಜಮ್ಮು ಮತ್ತು ಕಾಶ್ಮೀರದ 'ಉತ್ತಮ' ಪರಿಸ್ಥಿತಿಗಾಗಿ ಕೇಂದ್ರ ಸರ್ಕಾರವನ್ನು ಶ್ಲಾಘಿಸುವ ಮೂಲಕ ಸುದ್ದಿ ಮಾಡಿದ್ದಾರೆ.

SCROLL FOR NEXT