ದೇಶ

ರಾಜಸ್ಥಾನ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ; ಜಾತಿ ಸಮೀಕ್ಷೆ, ಬಡ್ಡಿರಹಿತ ಕೃಷಿ ಸಾಲ ಸೇರಿ ಹಲವು ಭರವಸೆ

Ramyashree GN

ಜೈಪುರ: ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಮಂಗಳವಾರ ರಾಜ್ಯ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಜಾತಿ ಸಮೀಕ್ಷೆ, ರೈತರಿಗೆ 2 ಲಕ್ಷದವರೆಗೆ ಬಡ್ಡಿರಹಿತ ಸಾಲ ಮತ್ತು 10 ಲಕ್ಷ ಉದ್ಯೋಗಾವಕಾಶಗಳ ಭರವಸೆ ನೀಡಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸತತ ಎರಡನೇ ಬಾರಿಗೆ ಅಧಿಕಾರಕ್ಕೇರುವ ಇಂಗಿತ ಹೊಂದಿದೆ. 

ಪಕ್ಷವು ಪಂಚಾಯತ್ ಮಟ್ಟದಲ್ಲಿ ನೇಮಕಾತಿ ಮತ್ತು ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಎಂಎಸ್‌ಪಿ ಅನ್ನು ಜಾರಿಗೆ ತರಲು ವಿಶೇಷ ಕಾನೂನು ರೂಪಿಸುವುದಾಗಿ ಭರವಸೆ ನೀಡಿತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ರಾಜಸ್ಥಾನದಲ್ಲಿ ಐದು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 10 ಲಕ್ಷ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದೆ. ಇದರಲ್ಲಿ ಸರ್ಕಾರಿ ವಲಯದಲ್ಲಿ 4 ಲಕ್ಷ ಉದ್ಯೋಗಗಳು ಸೇರಿವೆ ಎಂದರು. 

ಚಿರಂಜೀವಿ ಆರೋಗ್ಯ ವಿಮಾ ಯೋಜನೆಯಡಿ ಫಲಾನುಭವಿಗಳಿಗೆ ವಾರ್ಷಿಕ 25 ಲಕ್ಷದಿಂದ 50 ಲಕ್ಷಕ್ಕೆ ದ್ವಿಗುಣಗೊಳಿಸುವುದಾಗಿ ಮತ್ತು ಸಣ್ಣ ವ್ಯಾಪಾರಿಗಳು, ಅಂಗಡಿಕಾರರು ಮತ್ತು ಯುವ ಉದ್ಯಮಿಗಳಿಗೆ 5 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡುವುದಾಗಿ ಕಾಂಗ್ರೆಸ್ ಭರವಸೆ ನೀಡಿದೆ.

ಇಲ್ಲಿನ ಪಿಸಿಸಿ ಕಚೇರಿಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಶೋಕ್ ಗೆಹ್ಲೋಟ್, ಪಿಸಿಸಿ ಮುಖ್ಯಸ್ಥ ಗೋವಿಂದ್ ಸಿಂಗ್ ದೋತಸ್ರಾ, ಪ್ರಣಾಳಿಕೆ ಸಮಿತಿ ಅಧ್ಯಕ್ಷ ಸಿಪಿ ಜೋಶಿ, ಮಾಜಿ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಇತರ ನಾಯಕರು ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.

ಪ್ರಣಾಳಿಕೆಯ ಪ್ರಮುಖ ಅಂಶಗಳನ್ನು ಎತ್ತಿ ಹಿಡಿದ ಜೋಶಿ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಎಂಎಸ್‌ಪಿ ನೀಡಲಾಗುವುದು ಎಂದು ಹೇಳಿದರು.

ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಸ್ಥಾನದ ಆರ್ಥಿಕತೆಯು ವರ್ಷಾಂತ್ಯದ ವೇಳೆಗೆ 15 ಲಕ್ಷ ಕೋಟಿ ರೂ. ಆಗಲಿದೆ. 2030ರ ವೇಳೆಗೆ ಅದನ್ನು 30 ಲಕ್ಷ ಕೋಟಿ ರೂ.ಗೆ ಕೊಂಡೊಯ್ಯುವ ಗುರಿ ಇದೆ ಎಂದರು.

ಪಕ್ಷವನ್ನು ಪುನರಾಯ್ಕೆ ಮಾಡಿದರೆ ರಾಜ್ಯದ ಜನತೆಗೆ ಏಳು ಖಾತರಿಗಳು ಅಥವಾ ಭರವಸೆಗಳನ್ನು ಗೆಹ್ಲೋಟ್ ಈ ಹಿಂದೆ ಘೋಷಿಸಿದ್ದರು.

ಕುಟುಂಬದ ಮುಖ್ಯಸ್ಥರಿಗೆ ವಾರ್ಷಿಕ 10,000 ರೂ. ಗೌರವಧನ, 1.05 ಕೋಟಿ ಕುಟುಂಬಗಳಿಗೆ 500 ರೂ.ಗಳಿಗೆ ಎಲ್‌ಪಿಜಿ ಸಿಲಿಂಡರ್, ದನ ಸಾಕುವವರಿಂದ ಕೆಜಿಗೆ 2 ರೂ. ನೀಡಿ ಸಗಣಿ ಖರೀದಿ, ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಗೆ ಕಾನೂನು, ಸರ್ಕಾರಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್, ನೈಸರ್ಗಿಕ ವಿಕೋಪದಿಂದಾಗುವ ನಷ್ಟವನ್ನು ಸರಿದೂಗಿಸಲು ಪ್ರತಿ ಕುಟುಂಬಕ್ಕೆ 15 ಲಕ್ಷದವರೆಗೆ ವಿಮಾ ರಕ್ಷಣೆ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಾಲಾ ಶಿಕ್ಷಣ ಸೇರಿದಂತೆ ಏಳು ಖಾತರಿಗಳನ್ನು ಘೋಷಿಸಿದ್ದರು.

200 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 25 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 3 ರಂದು ಮತ ಎಣಿಕೆ ನಡೆಯಲಿದೆ.

SCROLL FOR NEXT