ಸಂಗಾರೆಡ್ಡಿ: ತೆಲಂಗಾಣದಲ್ಲಿ ಕೆ ಚಂದ್ರಶೇಖರ್ ರಾವ್ ಅವರು ಅಧಿಕಾರದಲ್ಲಿ ಇರಬೇಕೆಂದು ಪ್ರಧಾನಿ ನರೇಂದ್ರ ಮೋದಿ ಬಯಸುತ್ತಿದ್ದಾರೆ. ಈ ಮೂಲಕ ರಾಷ್ಟ್ರಮಟ್ಟದಲ್ಲಿ ಪ್ರಧಾನಿ ಕೆಸಿಆರ್ ಬೆಂಬಲದ ಲಾಭ ಪಡೆಯುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.
ಬಿಆರ್ಎಸ್ ಮತ್ತು ಬಿಜೆಪಿ ನಡುವಿನ ಪಾಲುದಾರಿಕೆಯ ಆರೋಪವನ್ನು ಪುನರುಚ್ಚರಿಸಿದ ಅವರು, ತೆಲಂಗಾಣದಲ್ಲಿ ಕೆಸಿಆರ್ ಸೋಲಿಸುವುದು ಮತ್ತು ನಂತರ ಕೇಂದ್ರದಲ್ಲಿ ಮೋದಿಯನ್ನು ಸೋಲಿಸುವುದು ಕಾಂಗ್ರೆಸ್ನ ಮೊದಲ ಗುರಿಯಾಗಿದೆ ಎಂದು ಹೇಳಿದರು.
ಪಕ್ಷದ ಅಭ್ಯರ್ಥಿ ಮಾಜಿ ಉಪಮುಖ್ಯಮಂತ್ರಿ ದಾಮೋದರ್ ರಾಜನರಸಿಂಹ ಪರ ಪ್ರಚಾರಕ್ಕಾಗಿ ಸಂಗಾರೆಡ್ಡಿ ಜಿಲ್ಲೆಯ ಆಂದೋಲೆಯಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ, ಬಿಆರ್ಎಸ್ ಮತ್ತು ಎಂಐಎಂ ಒಟ್ಟಾಗಿದ್ದು, ಕಾಂಗ್ರೆಸ್ ಎಲ್ಲರ ವಿರುದ್ಧ ಹೋರಾಡುತ್ತಿದೆ ಎಂದರು.
ಜಿಎಸ್ಟಿ, ನೋಟು ಅಮಾನ್ಯೀಕರಣ ಮತ್ತು ಕೃಷಿ ಮಸೂದೆಗಳ ಕುರಿತು ಮೋದಿ ಸರ್ಕಾರಕ್ಕೆ ಬಿಆರ್ಎಸ್ ಬೆಂಬಲ ನೀಡಿದೆ. ನಾನು ಪ್ರತಿದಿನ ಬಿಜೆಪಿ ವಿರುದ್ಧ ಹೋರಾಡುತ್ತಿರುವುದರಿಂದ ನನ್ನ ವಿರುದ್ಧ 24 ಪ್ರಕರಣಗಳಿವೆ. ಆದರೆ, ಕೆಸಿಆರ್ ವಿರುದ್ಧ ಇ.ಡಿ, ಸಿಬಿಐ ಅಥವಾ ಐಟಿಯ ಒಂದು ಪ್ರಕರಣವೂ ಇಲ್ಲ ಎಂದು ಅವರು ಹೇಳಿದರು.
ಎಂಐಎಂ ಅನ್ನು ಗುರಿಯಾಗಿಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಎಲ್ಲೆಲ್ಲಿ ಬಿಜೆಪಿ ವಿರುದ್ಧ ಹೋರಾಡುತ್ತಿದೆಯೋ, ಅಲ್ಲೆಲ್ಲಾ ಬಿಜೆಪಿಗೆ ಸಹಾಯ ಮಾಡಲು ಎಂಐಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ ಎಂದು ದೂರಿದರು.
ಇದನ್ನೂ ಓದಿ: ಹೈದರಾಬಾದ್: ನಿರುದ್ಯೋಗಿ ಯುವಕರೊಂದಿಗೆ ರಾಹುಲ್ ಸಂವಾದ
ಶನಿವಾರ ರಾತ್ರಿ ಹೈದರಾಬಾದ್ನಲ್ಲಿ ನಿರುದ್ಯೋಗಿ ಯುವಕರೊಂದಿಗೆ ನಡೆದ ಸಭೆಯನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, ಟಿಎಸ್ಪಿಎಸ್ಸಿ ಪರೀಕ್ಷೆಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಮೂಲಕ ಕೆಸಿಆರ್ ಸರ್ಕಾರ ಅವರ ಭವಿಷ್ಯವನ್ನು ನಾಶಪಡಿಸಿದೆ. ಅವರು ಹಣ ಖರ್ಚು ಮಾಡಿದರು ಮತ್ತು ಪರೀಕ್ಷೆಗಳಿಗೆ ತಯಾರಾಗಲು ಕಷ್ಟಪಟ್ಟರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಅವರ ಎಲ್ಲಾ ಕನಸುಗಳನ್ನು ಛಿದ್ರಗೊಳಿಸಿತು' ಎಂದು ಅವರು ಹೇಳಿದರು.
ನವೆಂಬರ್ 30ರ ವಿಧಾನಸಭಾ ಚುನಾವಣೆಯನ್ನು 'ದೋರಲ ಸರ್ಕಾರ' ಮತ್ತು 'ಪ್ರಜಾಲ ಸರ್ಕಾರ'ದ ನಡುವಿನ ಹೋರಾಟ ಎಂದು ಕರೆದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜನಪರ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.
ಇಡೀ ದೇಶದಲ್ಲಿ ಕೆಸಿಆರ್ ಸರ್ಕಾರ ಅತ್ಯಂತ ಭ್ರಷ್ಟವಾಗಿದೆ. ತೆಲಂಗಾಣ ರಾಜ್ಯಕ್ಕಾಗಿ ಹೋರಾಡುತ್ತಿರುವಾಗ ಬಡವರು, ಬುಡಕಟ್ಟು ಜನಾಂಗ, ರೈತರು ಮತ್ತು ದುರ್ಬಲ ವರ್ಗಗಳಿಗಾಗಿ ಕೆಲಸ ಮಾಡುವ ಸರ್ಕಾರ ಬರುತ್ತದೆ ಎಂಬ ಕನಸನ್ನು ಜನರು ಕಂಡಿದ್ದರು. ಆದರೆ, ಕುಟುಂಬವೊಂದು ತಮ್ಮನ್ನು ಆಳುತ್ತಿದೆ ಎಂಬುದನ್ನು ಅರಿತುಕೊಂಡರು' ಎಂದು ಅವರು ಹೇಳಿದರು.
ಕೆಸಿಆರ್ ಮತ್ತು ಅವರ ಕುಟುಂಬದಿಂದ ಲೂಟಿ ಮಾಡಿದ ಹಣವನ್ನು ಕಾಂಗ್ರೆಸ್ ಆರು ಭರವಸೆಗಳ ಅನುಷ್ಠಾನದ ಮೂಲಕ ಜನರಿಗೆ ಹಿಂದಿರುಗಿಸುತ್ತದೆ ಎಂದು ಅವರು ಜನರಿಗೆ ಭರವಸೆ ನೀಡಿದರು.