ಲಖನೌ: 500 ವರ್ಷಗಳ ನಂತರ ಶ್ರೀರಾಮ ಜನ್ಮಭೂಮಿಯನ್ನು ವಾಪಸ್ ಪಡೆದವರಿಗೆ ಸಿಂಧ್ ಪ್ರಾಂತ್ಯವನ್ನು ಮರಳಿ ಪಡೆಯಲು ಸಾಧ್ಯವಿಲ್ಲವೇ? ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಭಾನುವಾರ ಹೇಳಿದ್ದಾರೆ.
ಎರಡು ದಿನಗಳ ರಾಷ್ಟ್ರೀಯ ಸಿಂಧಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಉತ್ತರ ಪ್ರದೇಶ ಸಿಎಂ, ಅಯೋಧ್ಯೆಯಲ್ಲಿ 500 ವರ್ಷಗಳ ನಂತರ ಭವ್ಯವಾದ ರಾಮ ಮಂದಿರ ನಿರ್ಮಾಣವಾಗುತ್ತಿದ್ದು, ಮುಂದಿನ ವರ್ಷ ಜನವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮ ಲಲ್ಲಾ ಪ್ರತಿಷ್ಠಾಪನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಇದನ್ನು ಓದಿ: ಇರುವುದೊಂದೇ ಸನಾತನ ಧರ್ಮ, ಅದನ್ನು ಹೊರತುಪಡಿಸಿದರೆ ಉಳಿದೆಲ್ಲವೂ... ಯೋಗಿ ಆದಿತ್ಯನಾಥ್ ವ್ಯಾಖ್ಯಾನವೇನು?
500 ವರ್ಷಗಳ ನಂತರ ರಾಮ ಜನ್ಮಭೂಮಿಯನ್ನು ಹಿಂಪಡೆಯಲು ಸಾಧ್ಯವಾಗಿರುವಾಗ, ನಾವು ಸಿಂಧ್(ಪ್ರಸ್ತುತ ಪಾಕಿಸ್ತಾನದಲ್ಲಿದೆ)ಅನ್ನು ಸಹ ಮರಳಿ ಪಡೆಯಬಹುದು ಎಂದು ಉತ್ತರ ಪ್ರದೇಶ ಸಿಎಂ ಹೇಳಿದ್ದಾರೆ.
ಸಿಂಧಿ ಸಮುದಾಯ ತನ್ನ ಇತಿಹಾಸದ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಬೇಕಾಗಿದೆ ಎಂದು ಆದಿತ್ಯನಾಥ್, ದೇಶ ವಿಭಜನೆಯ ನಂತರ ಸಿಂಧಿ ಸಮುದಾಯ ಹೆಚ್ಚು ನಷ್ಟವನ್ನು ಅನುಭವಿಸಿತು. ಕೇವಲ ಒಬ್ಬರ ಹಠಮಾರಿತನ ದೇಶ ವಿಭಜನೆಗೆ ಕಾರಣವಾಯಿತು ಎಂದರು.