ದೇಶ

ಸಂಗಾತಿ ಜೊತೆಗಿದ್ದದ್ದನ್ನು ನೋಡಿದ ಸಹೋದರಿಯರು: ಅಕ್ಕನಿಂದಲೇ ಇಬ್ಬರು ಅಪ್ರಾಪ್ತೆಯರ ಶಿರಚ್ಛೇದ

Shilpa D

ಲಕ್ನೋ: ಉತ್ತರಪ್ರದೇಶದ ಎತ್ವಾ ಜಿಲ್ಲೆಯ ಗ್ರಾಮವೊಂದರಲ್ಲಿ 4 ಮತ್ತು 6 ವರ್ಷ ವಯಸ್ಸಿನ ಸಹೋದರಿಯರ ಶಿರಚ್ಛೇದ ನಡೆದ ಅಮಾನುಷ ಘಟನೆ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಬಾಲಕಿಯರ ಅಕ್ಕನನ್ನು ಬಂಧಿಸಲಾಗಿದೆ.

ಬಲರಾಯ್ ಠಾಣೆ ವ್ಯಾಪ್ತಿಯ ಬಹದ್ದೂರ್ ಪುರ ಎಂಬ ಗ್ರಾಮದಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದ್ದು, ಜೈವೀರ್ ಸಿಂಗ್ ಎಂಬುವವರ ಮಕ್ಕಳಾದ ಸುರಭಿ (7) ಮತ್ತು ರೋಶನಿ (4) ಎಂಬ ಬಾಲಕಿಯರ ಶಿರಚ್ಛೇದ ಮಾಡಲಾಗಿದೆ. ಈ ಬಾಲಕಿಯರ ಶವ ಅದೇ ಮನೆಯ ಬೇರೆ ಬೇರೆ ಕೊಠಡಿಗಳಲ್ಲಿ ಪತ್ತೆಯಾಗಿತ್ತು.

ಈ ಸಂಬಂಧ ಈ ಸಹೋದರಿಯರ ಅಕ್ಕ ಅಂಜಲಿಯನ್ನು ಬಂಧಿಸಲಾಗಿದೆ. ಈ ಅಪರಾಧದ ತಪ್ಪನ್ನು ಯುವತಿ ಒಪ್ಪಿಕೊಂಡಿದ್ದು, ಈ ಹತ್ಯೆಯ ಉದ್ದೇಶವೇನು ಎಂಬ ರಹಸ್ಯವನ್ನು ಬೇಧಿಸಲು ತನಿಖೆ ಮುಂದುವರಿದಿದೆ ಎಂದು ಕಾನ್ಪುರ ವಲಯದ ಐಜಿ ಪ್ರಶಾಂತ್ ಕುಮಾರ್ ಹೇಳಿದ್ದಾರೆ.

ಈ ಯುವತಿಯ ಜತೆಗೆ ಪೊಲೀಸರು ಮೂವರು ಪುರುಷರನ್ನು ಕೂಡಾ ವಿಚಾರಣೆಗೆ ಗುರಿಪಡಿಸಿದ್ದು, ಭಾರತೀಯ ದಂಡಸಂಹಿತೆ ಸೆಕ್ಷನ್ 302 ಹಾಗೂ 201 ಅನ್ವಯ ಕೊಲೆ ಮತ್ತು ಸಾಕ್ಷ್ಯ ನಾಶದ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದ್ದು, ಇದರಲ್ಲಿ ಇತರ ಮೂವರು ಷಾಮೀಲಾಗಿರುವ ಸಾಧ್ಯತೆ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಎತ್ವಾ ಎಸ್ಎಸ್ಪಿ ಸಂಜಯ್ ವರ್ಮಾ ಹೇಳಿದ್ದಾರೆ.

ಪೊಲೀಸರು ಮನೆಯಿಂದ ಗುದ್ದಲಿ ಮತ್ತು ಆರೋಪಿ ಯುವತಿ ಧರಿಸಿದ್ದ ಬಟ್ಟೆಯನ್ನು ವಶಪಡಿಸಿಕೊಂಡಿದ್ದರೆ. ಮಚ್ಚು ಹಾಗೂ ಬಟ್ಟೆಯಲ್ಲಿ ರಕ್ತದ ಕಲೆಗಳು ಇರುವುದನ್ನು ವಿಧಿವಿಜ್ಞಾನ ತಂಡ ಪತ್ತೆ ಮಾಡಿದೆ. ಇದರ ಕುರುಹು ನಾಶಪಡಿಸುವ ಸಲುವಾಗಿ ಬಟ್ಟೆಯನ್ನು ತೊಳೆಯಲಾಗಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

ಈ ಘಟನೆ ನಡೆದಾಗ ಜೈವೀರ್, ಅವರ ಪತ್ನಿ ಸುಶೀಲಾ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ. ಈ ಬಗ್ಗೆ ಮೊದಲು ಪೊಲೀಸರಿಗೆ ಮಾಹಿತಿ ನೀಡಿದ್ದ ಅಂಜಲಿ, ತಾನು ಮನೆಗೆ ವಾಪಸ್ಸಾದಾಗ ಸಹೋದರಿಯರ ಶವಗಳು ಒಂದು ಕೊಠಡಿಯಲ್ಲಿ ಹಾಗೂ ತಲೆಗಳು ಇನ್ನೊಂದು ಕೊಠಡಿಯಲ್ಲಿ ಇದ್ದವು ಎಂದು ಹೇಳಿದ್ದಳು.

SCROLL FOR NEXT