ದೇಶ

ಅಂಗಲ್ಲು ಹಿಂಸಾಚಾರ ಪ್ರಕರಣ: ಚಂದ್ರಬಾಬು ನಾಯ್ಡುಗೆ ನೀರೀಕ್ಷಣಾ ಜಾಮೀನು ಸಿಕ್ಕರೂ ಬಿಡುಗಡೆ ಸದ್ಯಕ್ಕಿಲ್ಲ!

Ramyashree GN

ವಿಜಯವಾಡ: ಅಂಗಲ್ಲು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರಿಗೆ ಆಂಧ್ರ ಪ್ರದೇಶದ ಹೈಕೋರ್ಟ್ ಶುಕ್ರವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅನ್ನಮಯ್ಯ ಜಿಲ್ಲೆಯ ಅಂಗಲ್ಲು ಗ್ರಾಮದಲ್ಲಿ ಆಗಸ್ಟ್ 4ರಂದು ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮುಡಿವೇಡು ಪೊಲೀಸರು ಚಂದ್ರಬಾಬು ನಾಯ್ಡು ಮತ್ತು ಇತರ ಹಲವು ಟಿಡಿಪಿ ಮುಖಂಡರು ಮತ್ತು ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಚಂದ್ರಬಾಬು ನಾಯ್ಡು ಅವರು ರಾಜ್ಯದಲ್ಲಿ ಬಾಕಿ ಉಳಿದಿರುವ ನೀರಾವರಿ ಯೋಜನೆಗಳ ಪರಿಶೀಲನೆಯ ಪ್ರವಾಸದಲ್ಲಿದ್ದಾಗ ಅವರ ಬೆಂಗಾವಲು ಪಡೆಗೆ ವೈಎಸ್‌ಆರ್‌ಸಿ ಕಾರ್ಯಕರ್ತರು ಅಡ್ಡಿಪಡಿಸಿದ್ದು ಉಭಯ ಪಕ್ಷಗಳ ನಡುವಿನ ಘರ್ಷಣೆಗೆ ಕಾರಣವಾಯಿತು.
ವಾದದ ಸಮಯದಲ್ಲಿ, ರ‍್ಯಾಲಿಗೆ ಟಿಡಿಪಿ ಅನುಮತಿ ತೆಗೆದುಕೊಂಡಿತ್ತು. ಆದರೆ, ವೈಎಸ್‌ಆರ್‌ಸಿ ಕಾರ್ಯಕರ್ತರು ದಾಳಿ ಮಾಡಿದರು ಎಂದು ನಾಯ್ಡು ಅವರ ವಕೀಲರು ವಾದಿಸಿದರು. 

ಪೊಲೀಸರ ಪರವಾಗಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಪಿ ಸುಧಾಕರ್ ರೆಡ್ಡಿ, ನಾಯ್ಡು ಅವರು ವಿರೋಧ ಪಕ್ಷದ ನಾಯಕರ ಮೇಲೆ ಹಲ್ಲೆ ಮಾಡಲು ಟಿಡಿಪಿ ಕಾರ್ಯಕರ್ತರನ್ನು ಪ್ರಚೋದಿಸಿದರು ಎಂದು ವಾದಿಸಿದರು. 

ಎರಡೂ ಕಡೆಯ ವಾದವನ್ನು ಆಲಿಸಿದ ಹೈಕೋರ್ಟ್, ನಾಯ್ಡು ಅವರಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.
ನಾಯ್ಡು ವಿರುದ್ಧ ಇನ್ನರ್ ರಿಂಗ್ ರೋಡ್ ಮತ್ತು ಫೈಬರ್ ನೆಟ್‌ಗೆ ಸಂಬಂಧಿಸಿದಂತೆ ದಾಖಲಾಗಿರುವ ಭ್ರಷ್ಟಾಚಾರ ಪ್ರಕರಣಗಳು ಬಾಕಿ ಉಳಿದಿರುವುದರಿಂದ ಟಿಡಿಪಿ ಮುಖ್ಯಸ್ಥರು ಸದ್ಯ ಜೈಲಿನಲ್ಲೇ ಉಳಿಯುವಂತಾಗಿದೆ.

SCROLL FOR NEXT