ದೇಶ

ಐಐಟಿ-ಖರಗ್‌ಪುರ ವಿದ್ಯಾರ್ಥಿ ಆತ್ಮಹತ್ಯೆ: ಅಧ್ಯಾಪಕರಿಂದ 'ಅನಗತ್ಯ ಒತ್ತಡ' ಎಂದ ಪೋಷಕರು!

Lingaraj Badiger

ಕೋಲ್ಕತ್ತಾ: ಐಐಟಿ-ಖರಗ್‌ಪುರದ ನಾಲ್ಕನೇ ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ಕೋಣೆಯಲ್ಲಿ ಶವವಾಗಿ ಪತ್ತೆಯಾದ ಒಂದು ದಿನದ ನಂತರ, ತಮ್ಮ ಮಗನ ಆತ್ಮಹತ್ಯೆಗೆ ಸಂಸ್ಥೆಯ ಅಧ್ಯಾಪಕರೇ ಹೊಣೆ ಎಂದು ಪೋಷಕರು ಗುರುವಾರ ಆರೋಪಿಸಿದ್ದಾರೆ.

ಅಧ್ಯಾಪಕರ "ಅನಗತ್ಯ" ಒತ್ತಡದಿಂದಾಗಿ ತಮ್ಮ ಪುತ್ರ ಕೆ.ಕಿರಣ್ ಚಂದ್ರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

ಇಂದು ಬೆಳಗ್ಗೆ ವಿದ್ಯಾರ್ಥಿಯ ತಂದೆ ಮತ್ತು ಚಿಕ್ಕಪ್ಪ ತಮ್ಮ ತವರು ರಾಜ್ಯ ತೆಲಂಗಾಣದಿಂದ ವಿಶ್ವವಿದ್ಯಾಲಯಕ್ಕೆ ಆಗಮಿಸಿದ್ದು, ನಿರ್ದಿಷ್ಟ ಅವಧಿಯಲ್ಲಿ ಪ್ರಾಜೆಕ್ಟ್ ಪೂರ್ಣಗೊಳಿಸುವ ಸಂಬಂಧ ಕೆಲವು ಅಧ್ಯಾಪಕರಿಂದ ಕಿರಣ್ ತೀವ್ರ ಒತ್ತಡಕ್ಕೆ ಒಳಗಾಗಿದ್ದರು ಎಂದು ಹೇಳಿದ್ದಾರೆ.

"ಪ್ರಾಜೆಕ್ಟ್ ವಿಚಾರದಲ್ಲಿ ಕಿರಣ್ ಹಿಂದುಳಿದಿದ್ದರೆ ಇನ್ಸ್ಟಿಟ್ಯೂಟ್ ಅಧಿಕಾರಿಗಳು ನಮಗೆ ತಿಳಿಸಬಹುದಿತ್ತು. ಒತ್ತಡ ಹಾಕಿದ್ದು ಸರಿಯಲ್ಲ. ಇದರಿಂದ ನಮ್ಮ ಮಗ ಪ್ರಾಣ ಕಳೆದುಕೊಳ್ಳಬೇಕಾಯಿತು" ಎಂದು ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ.

ಆದಾಗ್ಯೂ, ವಿದ್ಯಾರ್ಥಿಯ ತಂದೆ ಮತ್ತು ಚಿಕ್ಕಪ್ಪ ಐಐಟಿ-ಖರಗ್‌ಪುರ ಅಧಿಕಾರಿಗಳ ಅಥವಾ ಅಧ್ಯಾಪಕರ ವಿರುದ್ಧ ಯಾವುದೇ ಕೇಸ್ ದಾಖಲಿಸಿಲ್ಲ. ಏಕೆಂದರೆ ಅದರಿಂದ ಮಗನನ್ನು ಮರಳಿ ತರಲು ಸಾಧ್ಯವಿಲ್ಲ ಎಂದಿದ್ದಾರೆ.

ವಿದ್ಯಾರ್ಥಿಯ ಸಾವು "ಆತ್ಮಹತ್ಯೆ" ಎಂದು ಐಐಟಿ-ಖರಗ್‌ಪುರ ಪ್ರಕಟಣೆಯಲ್ಲಿ ತಿಳಿಸಿದೆ.

SCROLL FOR NEXT