ದೇಶ

ಮಧ್ಯಪ್ರಾಚ್ಯದ ಸಂಘರ್ಷ ಗಾಜಾವನ್ನೂ ದಾಟಿ ಹರಡಿದರೆ, ಭಾರತೀಯರಿಗೆ ಸಂಕಷ್ಟ: ಓಮರ್ ಅಬ್ದುಲ್ಲಾ 

Srinivas Rao BV

ಶ್ರೀನಗರ: ನ್ಯಾಷನಲ್ ಕಾನ್ಫರೆನ್ಸ್ ನ ನಾಯಕ ಓಮರ್ ಅಬ್ದುಲ್ಲಾ, ಮಧ್ಯಪ್ರಾಚ್ಯದ ಸಂಘರ್ಷದ ಬಗ್ಗೆ ಮಾತನಾಡಿದ್ದಾರೆ. 

ಒಂದು ವೇಳೆ ಮಧ್ಯಪ್ರಾಚ್ಯದ ಸಂಘರ್ಷ ಗಾಜಾವನ್ನೂ ದಾಟಿ ಹರಡಿದರೆ, ಆ ಪ್ರಾಂತ್ಯದಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ನೌಕರರ ಮೇಲೆ ಅದು ಪರಿಣಾಮ ಉಂಟುಮಾಡಲಿದೆ ಎಂದು ಓಮರ್ ಅಬ್ದುಲ್ಲಾ ಅಭಿಪ್ರಾಯಪಟ್ಟಿದ್ದಾರೆ.

ಸಂಘರ್ಷ ಮತ್ತಷ್ಟು ಮುಂದುವರೆದರೆ, ಅದು ನಮ್ಮ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ. ಆ ಪ್ರದೇಶದಲ್ಲಿ ಭಾರತೀಯ ಮೂಲದವರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಬೇರೆ ದೇಶದ ಮೂಲದ ಜನಸಂಖ್ಯೆ ಇಲ್ಲ ಆದ್ದರಿಂದ ನಮ್ಮ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರಲಿದೆ ಎಂದು ಓಮರ್ ಅಬ್ದುಲ್ಲಾ ಹೇಳಿದ್ದಾರೆ. 

"ಅದಕ್ಕಾಗಿಯೇ ನಾವು ಯುದ್ಧವನ್ನು ನಿಲ್ಲಿಸಲು ಬಯಸುತ್ತೇವೆ, ಬಾಂಬ್ ಸ್ಫೋಟಗಳು ನಿಲ್ಲಬೇಕು. ವಿಶ್ವಸಂಸ್ಥೆ (ಯುಎನ್) ಮತ್ತು ಇತರ ದೇಶಗಳು ನ್ಯಾಯವನ್ನು ನೀಡಬೇಕು. ಅವರು ಬೇರೆ ಬೇರೆ ದೇಶಗಳಿಗೆ ವಿಭಿನ್ನ ನಿಯಮಗಳನ್ನು ಹೊಂದಲು ಸಾಧ್ಯವಿಲ್ಲ" ಎಂದು ಶ್ರೀನಗರದ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರಿಗೆ ಅಬ್ದುಲ್ಲಾ ಹೇಳಿದರು. 

ನಡೆಯುತ್ತಿರುವ ಸಂಘರ್ಷದ ಬಗ್ಗೆ ವಿಶ್ವಸಂಸ್ಥೆ ಮೌನ ವಹಿಸಿದೆಯೇ ಎಂಬ ಪ್ರಶ್ನೆಗೆ, ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಗಾಜಾದಲ್ಲಿ ತೆರೆದುಕೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟಿನ ಬಗ್ಗೆ ಜಾಗತಿಕ ಸಂಸ್ಥೆ ಮಾತನಾಡಿದ್ದರೂ, ಅದನ್ನು ಗಂಭೀರವಾಗಿ ಪರಿಗಣಿಸಲಾಗಿಲ್ಲ ಎಂದು ಹೇಳಿದ್ದಾರೆ.

"ಯುಎನ್ ಮೌನವಾಗಿಲ್ಲ, ಆದರೆ ದುರದೃಷ್ಟವಶಾತ್ ಅದು ಏನು ಹೇಳುತ್ತಿದೆ ಎಂಬುದರ ಬಗ್ಗೆ ಹೆಚ್ಚಿನ ಗಮನವನ್ನು ನೀಡಲಾಗುತ್ತಿಲ್ಲ. ನಾನು ನೋಡಿದ ಮಟ್ಟಿಗೆ, ಯುಎನ್ ಅಲ್ಲಿನ ಮಾನವೀಯ ಬಿಕ್ಕಟ್ಟಿನ ಬಗ್ಗೆ ಮಾತನಾಡಿದೆ, ಆದರೆ ಇಸ್ರೇಲ್ಗೆ ಯುಎಸ್, ಯುಕೆಯಿಂದ ತುಂಬಾ ಬೆಂಬಲ ಸಿಗುತ್ತಿದೆ ”ಎಂದು ಅವರು ಹೇಳಿದ್ದಾರೆ.
 

SCROLL FOR NEXT