ದೇಶ

ವಿಪಕ್ಷ ನಾಯಕರ ಫೋನ್ ಹ್ಯಾಕ್ ಮಾಡುವ ಯತ್ನ: ಆಪಲ್ ನಿಂದ ಡೇಟಾ ಕೇಳಿದ ಸರ್ಕಾರ

Srinivas Rao BV

ನವದೆಹಲಿ: ಭಾರತ ಸರ್ಕಾರ ಮತ್ತು ಆಪಲ್ ನಡುವೆ ತಿಕ್ಕಾಟ ಸಾಧ್ಯೆತಗಳನ್ನು ಉಂಟುಮಾಡುವ ಬೆಳವಣಿಗೆಯೊಂದರಲ್ಲಿ, ಕೇಂದ್ರ ಸರ್ಕಾರ ಆಪಲ್ ಬಳಿ ವಿಪಕ್ಷ ನಾಯಕರ ಫೋನ್ ಹ್ಯಾಕ್ ಮಾಡುವ ಯತ್ನದ ಆರೋಪಕ್ಕೆ ಸಂಬಂಧಿಸಿದ ಡೇಟಾ ನೀಡುವಂತೆ ಕೇಳಿದೆ.
 
ವಿಪಕ್ಷ ನಾಯಕರ ಮೇಲೆ ಸರ್ಕಾರವೇ ಇಂಥಹದ್ದೊಂದು ದಾಳಿಗೆ ಮುಂದಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರ ಆಪಲ್ ಸಂಸ್ಥೆಯನ್ನು ಈ ವಿಷಯವಾಗಿ, "ನಿಜವಾದ ಮತ್ತು ನಿಖರವಾದ ಮಾಹಿತಿಯನ್ನು ಬಹಿರಂಗಪಡಿಸುವಂತೆ ಸೂಚನೆ ನೀಡಿದೆ.
 
ಇದೇ ವೇಳೆ ದೇಶದಲ್ಲಿನ ಕೆಲವು ವಿರೋಧ ಪಕ್ಷದ ನಾಯಕರ ಫೋನ್‌ಗಳಲ್ಲಿನ 'ಸರ್ಕಾರಿ ಪ್ರಾಯೋಜಿತ' ದಾಳಿಕೋರರ ಕುರಿತು ಆಪಲ್ ಕಂಪನಿಯು ಸ್ಪಷ್ಟನೆ ನೀಡಿದ್ದು, 'ಅಂತಹ ದಾಳಿಗಳನ್ನು ಪತ್ತೆಹಚ್ಚುವುದು ಬೆದರಿಕೆ ಗುಪ್ತಚರ ಸಂಕೇತಗಳ ಮೇಲೆ ಅವಲಂಬಿತವಾಗಿದೆ. ಅದು ಸಾಮಾನ್ಯವಾಗಿ ಅಪೂರ್ಣವಾಗಿರುತ್ತದೆ. ಕೆಲವು ಆಪಲ್ ಬೆದರಿಕೆ ಅಧಿಸೂಚನೆಗಳು ಸುಳ್ಳು ಎಚ್ಚರಿಕೆಗಳಾಗಿರಬಹುದು ಅಥವಾ ಕೆಲವು ದಾಳಿಗಳು ಪತ್ತೆಯಾಗಿಲ್ಲ ಎಂದು ಅದು ಹೇಳಿದೆ.

ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಕೆಸಿ ವೇಣುಗೋಪಾಲ್, ಪವನ್ ಖೇಡಾ, ತೃಣಮೂಲ ಕಾಂಗ್ರೆಸ್ ಸಂಸದ ಮಹುವಾ ಮೊಯಿತ್ರಾ, ಶಿವಸೇನೆ (ಯುಬಿಟಿ) ಸಂಸದ ಪ್ರಿಯಾಂಕಾ ಚತುರ್ವೇದಿ, ಎಐಎಂಐಎಂ ಸಂಸದ ಅಸಾದುದ್ದೀನ್ ಓವೈಸಿ ಸೇರಿದಂತೆ ಹಲವು ನಾಯಕರು ಐಫೋನ್ ಹ್ಯಾಕ್ ಗೆ ಸಂಬಂಧಿಸಿದ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. 

ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲಾ ನಾಗರಿಕರ ಗೌಪ್ಯತೆಯನ್ನು ಕಾಪಾಡುವುದು ಸರ್ಕಾರದ ಕರ್ತವ್ಯವಾಗಿದೆ ಮತ್ತು ಸರ್ಕಾರ ಈ ಪ್ರಕರಣವನ್ನು "ಬಹಳ ಗಂಭೀರವಾಗಿ" ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಸಚಿವ ವೈಷ್ಣವ್ ಹೇಳಿದ್ದಾರೆ. ಸತ್ಯವನ್ನು ಬಯಲಿಗೆಳೆಯಲು ಈ ಬಗ್ಗೆ ಕೂಲಂಕುಷವಾಗಿ ತನಿಖೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT