ದೇಶ

'ಸನಾತನ ಧರ್ಮ ಮಲೇರಿಯಾ, ಡೆಂಗ್ಯು ಇದ್ದಂತೆ, ಅದನ್ನು ನಿರ್ಮೂಲನೆ ಮಾಡಬೇಕು': ವಿವಾದ ಹುಟ್ಟುಹಾಕಿದ ಉದಯನಿಧಿ ಸ್ಟಾಲಿನ್ ಹೇಳಿಕೆ

Sumana Upadhyaya

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ‘ಸನಾತನ ಧರ್ಮ’ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸನಾತನ ಧರ್ಮವು ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ಹೊಂದಿಕೆಯಾಗುವುದಿಲ್ಲ, ಅದನ್ನು ತೊಡೆದುಹಾಕಬೇಕು ಎಂದು ಹೇಳಿದ್ದಲ್ಲದೆ ಸನಾತನ ಧರ್ಮ ಡೆಂಗ್ಯೂ ಮತ್ತು ಮಲೇರಿಯಾದಂತಹ ಕಾಯಿಲೆ ರೀತಿ ಎಂದು ಹೋಲಿಸಿದ್ದು ಬಿಜೆಪಿ ನಾಯಕರು ಸೇರಿದಂತೆ ಸಮಾಜದ ಒಂದು ವರ್ಗದ ಜನರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

"ಸನಾತನವು ಮಲೇರಿಯಾ ಮತ್ತು ಡೆಂಗ್ಯೂ ಇದ್ದಂತೆ. ಅದನ್ನು ವಿರೋಧಿಸುವುದು ಮಾತ್ರವಲ್ಲದೆ ನಿರ್ಮೂಲನೆ ಮಾಡಬೇಕು'' ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ. 

ಈ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ, ಹಲವರು ತಮಿಳುನಾಡು ಸಚಿವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಬಿಜೆಪಿಯ ಅಮಿತ್ ಮಾಳವೀಯ ಅವರು ಟ್ವಿಟ್ಟರ್ ನಲ್ಲಿ, ರಾಹುಲ್ ಗಾಂಧಿ 'ಮೊಹಬ್ಬತ್ ಕಿ ದುಕಾನ್' ಬಗ್ಗೆ ಮಾತನಾಡುತ್ತಾರೆ ಆದರೆ ಕಾಂಗ್ರೆಸ್ ಮಿತ್ರ ಡಿಎಂಕೆಯ ಕುಡಿ ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್‌ನ ಮೌನವೇ ಈ ನರಮೇಧದ ಕರೆಗೆ ಬೆಂಬಲವಾಗಿದೆ. ಇಂಡಿಯಾ ಮೈತ್ರಿಕೂಟ ಅದರ ಹೆಸರಿಗೆ ಸರಿಯಾಗಿ, ಅವಕಾಶವನ್ನು ನೀಡಿದರೆ, ಭಾರತವೆಂಬ ಸಹಸ್ರಮಾನದ ನಾಗರಿಕತೆಯನ್ನು ನಾಶಪಡಿಸುತ್ತದೆ ಎಂದಿದ್ದಾರೆ. 

ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಡಿಎಂಕೆ ಇತ್ತೀಚೆಗೆ ಮುಂಬೈನಲ್ಲಿ ಸಹ ವಿರೋಧ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಸಿತು. ಈ ಸಭೆಯ ಉದ್ದೇಶವು ಮುಂಬರುವ 2024 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ವಿರುದ್ಧ ಸ್ಪರ್ಧಿಸಲಿರುವ ಅವರ ಕಾರ್ಯತಂತ್ರಗಳನ್ನು ಸಮನ್ವಯಗೊಳಿಸುವುದು.

SCROLL FOR NEXT