ದೇಶ

ಕಾಶ್ಮೀರ: ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ, ಗಡಿ ನುಸುಳುವಿಕೆ ಯತ್ನ ವಿಫಲ

Lingaraj Badiger

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಒಳನುಸುಳುವಿಕೆ ಯತ್ನವನ್ನು ವಿಫಲಗೊಳಿಸಿದ ಸೇನಾ ಪಡೆ, ಬುಧವಾರ ಇಬ್ಬರು ಉಗ್ರರರನ್ನು ಹೊಡೆದುರುಳಿಸಿದೆ.

ಇಂದು ಪೂಂಚ್ ಜಿಲ್ಲೆಯಲ್ಲಿ ಯೋಧರೊಂದಿಗೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಇಬ್ಬರು ಭಯೋತ್ಪಾದಕರು ಹತರಾಗಿದ್ದಾರೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.

ಒಬ್ಬ ಭಯೋತ್ಪಾದಕನ ಶವವನ್ನು ವಶಪಡಿಸಿಕೊಳ್ಳಲಾಗಿದ್ದು, ಎರಡನೆಯವನ ದೇಹಕ್ಕಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಜಮ್ಮು ಮೂಲದ ರಕ್ಷಣಾ PRO ಲೆಫ್ಟಿನೆಂಟ್ ಕರ್ನಲ್ ಸುನೀಲ್ ಬರ್ತ್ವಾಲ್ ಹೇಳಿದ್ದಾರೆ.

ಪೂಂಚ್‌ನ ಮಂಡಿ ಉಪ ವಲಯದಲ್ಲಿ ಮಂಗಳವಾರ ಮತ್ತು ಬುಧವಾರ ಇಬ್ಬರು ಭಯೋತ್ಪಾದಕರು ಎಲ್‌ಒಸಿ ದಾಟುತ್ತಿರುವುದನ್ನು ಗಮನಿಸಿದ ನಂತರ ಕಾರ್ಯಾಚರಣೆ ಪ್ರಾರಂಭಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

"ಉಗ್ರರು ಗಡಿ ನುಸುಳುವುದನ್ನು ತಡೆಯಲು ಭಾರತೀಯ ಸೇನೆ ಮತ್ತು ಪೊಲೀಸರು ತಕ್ಷಣವೇ ಜಂಟಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು. ಪ್ರತಿಕೂಲ ಭೂಪ್ರದೇಶ, ದಟ್ಟವಾದ ಕಾಡು ಮತ್ತು ಕಡಿದಾದ ಇಳಿಜಾರಿನಲ್ಲಿದ್ದ ಉಗ್ರರು ಸೈನಿಕರ ಮೇಲೆ ಭಾರೀ ಪ್ರಮಾಣದ ಗುಂಡಿನ ದಾಳಿ ನಡೆಸಿದರು" ಎಂದು ರಕ್ಷಣಾ ಪಿಆರ್ ಒ ತಿಳಿಸಿದ್ದಾರೆ.

SCROLL FOR NEXT