ದೇಶ

ದೆಹಲಿಯಲ್ಲಿ ಮತ್ತೊಂದು ಭೀಕರ ಹತ್ಯೆ: ಮೊಬೈಲ್ ಕಳ್ಳರಿಂದ ರಿಸೆಪ್ಷನಿಸ್ಟ್ ಗೆ ಇರಿದು ಕೊಲೆ

Srinivasamurthy VN

ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆಯಾಗಿದ್ದು, ಮೊಬೈಲ್ ಕಳ್ಳರ ಗ್ಯಾಂಗ್ ವೊಂದು ರಿಸೆಪ್ಷನಿಸ್ಟ್ ಗೆ ಇರಿದು ಹತ್ಯೆ ಮಾಡಿದ್ದಾರೆ.
 
ಆಗ್ನೇಯ ದೆಹಲಿಯ ಸರಿತಾ ವಿಹಾರ್ ಪ್ರದೇಶದಲ್ಲಿ ದರೋಡೆಯ ಪ್ರಯತ್ನದ ವೇಳೆ 50 ವರ್ಷದ ವ್ಯಕ್ತಿಯನ್ನು ಇರಿದು ಹತ್ಯೆ ಮಾಡಲಾಗಿದೆ. ರಾತ್ರಿ 9.24ಕ್ಕೆ ವ್ಯಕ್ತಿಯೊಬ್ಬನಿಗೆ ಚೂರಿಯಿಂದ ಇರಿದಿರುವ ಬಗ್ಗೆ ಪಿಸಿಆರ್ ಕರೆ ಬಂದಿದ್ದು, ದಾಳಿಕೋರರು ಆತನ ಮೊಬೈಲ್ ಫೋನ್ ದೋಚಿ ಆತನಿಗೆ ಇರಿದಿದ್ದಾರೆ ಎಂದು ಉಪ ಪೊಲೀಸ್ ಆಯುಕ್ತ (ಆಗ್ನೇಯ) ರಾಜೇಶ್ ಡಿಯೋ ತಿಳಿಸಿದ್ದಾರೆ.

ಮೃತ ವ್ಯಕ್ತಿಯನ್ನು ಆಲಿ ವಿಹಾರ್ ನಿವಾಸಿ ಕನೈ ಮಲಿಕ್ ಎಂದು ಗುರುತಿಸಲಾಗಿದ್ದು, ಕೂಡಲೇ ಆತನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ ಎಂದು ಡಿಸಿಪಿ ದೇವು ತಿಳಿಸಿದ್ದಾರೆ.

ಯಾವುದೇ ಪ್ರತ್ಯಕ್ಷದರ್ಶಿ ಲಭ್ಯವಿಲ್ಲ. ಆದರೆ ಅಪರಾಧ ಸ್ಥಳದ ಬಳಿಯಿರುವ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ನಂತರ ಮತ್ತು ಆರೋಪಿಗಳಲ್ಲಿ ಒಬ್ಬನನ್ನು ಗುರುತಿಸಿದ ನಂತರ - ಗೌತಮ್ ಪುರಿ ನಿವಾಸಿ ರಾಜ್ ಕುಮಾರ್ (19) ಮತ್ತು ಆತನ ಸಹಚರನನ್ನು ಬಂಧಿಸಲಾಗಿದೆ. ರಾತ್ರಿ 9 ಗಂಟೆ ಸುಮಾರಿಗೆ ಕಲ್ಲು ದಾದಾ ಮತ್ತು ಬಿಲ್ಲಿ ಅಲಿಯಾಸ್ ಸೊಹೈಲ್ ಜೊತೆ ಸೇರಿ ರಾಜ್ ಕುಮಾರ್ ಮೊಬೈಲ್ ದೋಚಲು ಪ್ರಯತ್ನಿಸಿದ್ದಾನೆ. ಅದನ್ನು ಆತ ವಿರೋಧಿಸಿದಾಗ ಆತನ ಎದೆಗೆ ಚಾಕುವಿನಿಂದ ಇರಿದು, ಮೊಬೈಲ್ ಕಸಿದು ಪರಾರಿಯಾಗಿದ್ದಾನೆ. ಪ್ರಸ್ತುತ ಆತನನ್ನು ವಶಕ್ಕೆ ಪಡೆದಿದ್ದು, ಬಳಿಕ ತನಿಖೆ ನಡೆಸಿ ಎಲ್ಲ ಆರೋಪಿಗಳನ್ನು ಬಂಧಿಸಿದ್ದಾರೆ. 

ಸರಿತಾ ವಿಹಾರ್ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆ) ಮತ್ತು 397 (ದರೋಡೆ ಅಥವಾ ಡಕಾಯಿತಿ, ಸಾವು ಅಥವಾ ಘೋರ ಗಾಯವನ್ನು ಉಂಟುಮಾಡುವ ಪ್ರಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದರು.
 

SCROLL FOR NEXT