ಚೆನ್ನೈ: ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮದ ಬಗ್ಗೆ ಮಾತನಾಡಿದ ಕಾರಣಕ್ಕೆ ಈ ಚಿಕ್ಕ ಹುಡುಗನನ್ನು (ಉದಯನಿಧಿ) ಬೇಟೆಯಾಡಲಾಗುತ್ತಿದೆ ಎಂದು ನಟ, ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಸನಾತನ ಧರ್ಮದ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಬೆಂಬಲಕ್ಕೆ ಮಕ್ಕಳ ನೀಧಿ ಮೈಯಂ ಮುಖ್ಯಸ್ಥ ಹಾಗೂ ಸ್ಟಾರ್ ನಟ ಕಮಲ್ ಹಾಸನ್ ನಿಂತಿದ್ದಾರೆ. ಸನಾತನ ಧರ್ಮದ ಬಗ್ಗೆ ಹೇಳಿಕೆ ನೀಡಿದ ಉದಯನಿಧಿ ಸ್ಟಾಲಿನ್ ಅವರನ್ನು ಬೇಟೆಯಾಡಲಾಗುತ್ತಿದೆ ಎಂದು ಕಮಲ್ ಹಾಸನ್ ಶುಕ್ರವಾರ ಹೇಳಿದ್ದಾರೆ.
ಕೊಯಮತ್ತೂರಿನಲ್ಲಿ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಕಮಲ್ ಹಾಸನ್, ಸನಾತನ ಧರ್ಮದ ಬಗ್ಗೆ ಮಾತನಾಡಿದ್ದಕ್ಕೆ ಚಿಕ್ಕ ಹುಡುಗನನ್ನ ಟಾರ್ಗೆಟ್ ಮಾಡಲಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ಉದಯನಿಧಿ ಸ್ಟಾಲಿನ್, ಬಿಜೆಪಿ ಅಥವಾ ಇನ್ನಾವುದೇ ಸಂಘಟನೆಯನ್ನು ಹೆಸರಿಸದೆ ಪರೋಕ್ಷವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರ ಪುತ್ರನ ಬೆಂಬಲಕ್ಕೆ ಕಮಲ್ ಹಾಸನ್ ನಿಂತಿದ್ದಾರೆ.
ಇದನ್ನೂ ಓದಿ: ಸನಾತನ ಧರ್ಮದ ಕುರಿತು ಹೇಳಿಕೆ: ತಮಿಳುನಾಡಿನ ಸರ್ಕಾರ ಮತ್ತು ಸಚಿವ ಉದಯನಿಧಿ ಸ್ಟಾಲಿನ್ ಗೆ ಸುಪ್ರೀಂ ಕೋರ್ಟ್ ನೋಟಿಸ್
ಸನಾತನ ಧರ್ಮದ ಬಗ್ಗೆ ಸಚಿವರ ಹೇಳಿಕೆಯಲ್ಲಿ ಹೊಸದೇನೂ ಇಲ್ಲ ಎಂದ ನಟ, ತಮಿಳುನಾಡಿನ ಮಾಜಿ ಸಿಎಂ ಹಾಗೂ ಡಿಎಂಕೆ ನಾಯಕ ಎಂ ಕರುಣಾನಿಧಿ ಸೇರಿ ದ್ರಾವಿಡ ಚಳವಳಿಯ ಹಲವಾರು ನಾಯಕರು ಈ ಬಗ್ಗೆ ಹಿಂದೆ ಮಾತನಾಡಿದ್ದಾರೆ ಎಂದು ಹೇಳಿದರು. ಸುಧಾರಣಾವಾದಿ ಪೆರಿಯಾರ್ ವಿ ರಾಮಸ್ವಾಮಿ ಅವರಿಗೆ ಸಾಮಾಜಿಕ ಅನಿಷ್ಟಗಳ ವಿರುದ್ಧ ಎಷ್ಟು ಕೋಪವಿತ್ತು ಎಂಬುನ್ನು ಅವರ ಜೀವನ ನೋಡಿದರೆ ಅರ್ಥವಾಗುತ್ತದೆ. ಸನಾತನ ಎಂಬ ಪದವನ್ನು ತಮ್ಮನ್ನು ಸೇರಿ ಹಲವರು ಪೆರಿಯಾರ್ ಅವರಿಂದ ಅರ್ಥ ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ನಾವು ಸನಾತನ ಧರ್ಮದ ಬಗ್ಗೆ ಕೇಳಿದ್ದು ಪೆರಿಯಾರ್ ಅವರಿಂದ. ಇಡೀ ರಾಜ್ಯ ಪೆರಿಯಾರ್ ಅವರನ್ನು ತಮ್ಮವರೆಂದು ಹೇಳಬಹುದು ಆದರೆ ಯಾವುದೇ ರಾಜಕೀಯ ಪಕ್ಷಗಳು ಪೆರಿಯಾರ್ ಅವರನ್ನು ತಮ್ಮವರೆಂದು ಹೇಳಿಕೊಳ್ಳುವಂತಿಲ್ಲ ಎಂದು ಕಮಲ್ ಹಾಸನ್ ಹೇಳಿದರು. ಪೆರಿಯಾರ್ ಅವರು ಆರಂಭದಲ್ಲಿ ದೇವಾಲಯದೊಂದರಲ್ಲಿ ಪೂಜೆ ಮಾಡುತ್ತಿದ್ದರು. ನಂತರ ಜನಸೇವೆ ಮಾಡುವುದೇ ದೊಡ್ಡ ಸೇವೆ ಎಂದು ಅರಿತು ಬದುಕಿದರು ಎಂದು ಕಮಲ್ ಹಾಸನ್ ಹೇಳಿದರು.