ದೇಶ

ಎನ್‌ಸಿಪಿ ಹೆಸರು ಮತ್ತು ಚಿಹ್ನೆ ಕುರಿತು ಚುನಾವಣಾ ಆಯೋಗದ ಅಂತಿಮ ನಿರ್ಧಾರ ಒಪ್ಪಿಕೊಳ್ಳುತ್ತೇವೆ: ಅಜಿತ್ ಪವಾರ್

Ramyashree GN

ಪುಣೆ: ಎನ್‌ಸಿಪಿಯ ಹೆಸರು ಮತ್ತು ಚುನಾವಣಾ ಚಿಹ್ನೆಗೆ ಸಂಬಂಧಿಸಿದಂತೆ ಭಾರತದ ಚುನಾವಣಾ ಆಯೋಗದ 'ಅಂತಿಮ' ನಿರ್ಧಾರವನ್ನು ಒಪ್ಪಿಕೊಳ್ಳುವುದಾಗಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸೋಮವಾರ ಹೇಳಿದ್ದಾರೆ.

ಜುಲೈನಲ್ಲಿ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ-ಬಿಜೆಪಿ ಸರ್ಕಾರಕ್ಕೆ ಅಜಿತ್ ಪವಾರ್ ನೇತೃತ್ವದಲ್ಲಿ ಎನ್‌ಸಿಪಿಯ ಎಂಟು ಶಾಸಕರು ಸೇರಿದ್ದರು. ತಮ್ಮ ಚಿಕ್ಕಪ್ಪ ಶರದ್ ಪವಾರ್ ಸ್ಥಾಪಿಸಿದ ಎನ್‌ಸಿಪಿಯ ಬಹುಪಾಲು ಶಾಸಕರ ಬೆಂಬಲ ತಮಗಿದೆ ಎಂದಿದ್ದ ಅಜಿತ್ ಪವಾರ್, ಪಕ್ಷದ ಹೆಸರು ಮತ್ತು ಚಿಹ್ನೆಯ ಮೇಲೆ ಚುನಾವಣಾ ಆಯೋಗದಲ್ಲಿ ಹಕ್ಕು ಸಾಧಿಸಿದ್ದರು.

ಅಜಿತ್ ಪವಾರ್ ಬಣದ ನಡೆಗೆ ಶರದ್ ಪವಾರ್ ಬಣ ಕೂಡ ಚುನಾವಣಾ ಆಯೋಗದಲ್ಲಿ ಸವಾಲು ಎಸೆದಿದ್ದು, ಈ ಕುರಿತಾದ ನಿರ್ಧಾರ ಇನ್ನೂ ಬಾಕಿ ಇದೆ. 

ಶರದ್ ಪವಾರ್ ಬಣ ತಮ್ಮ ಗುಂಪಿಗೆ ಸೇರುವ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್, ಅವರು ತಮ್ಮ ಹಕ್ಕುಗಳನ್ನು ಚಲಾಯಿಸಬಹುದು ಎಂದು ಹೇಳಿದರು.

ಪುಣೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಅಂತಿಮ ನಿರ್ಧಾರವನ್ನು ಚುನಾವಣಾ ಆಯೋಗ ಮಾಡುತ್ತದೆ. ಎರಡೂ ಕಡೆಯವರು ಚುನಾವಣಾ ಆಯೋಗಕ್ಕೆ ಹೋಗಿದ್ದಾರೆ ಮತ್ತು ಪ್ರತಿಯೊಬ್ಬರೂ ತಮ್ಮ ನಿಲುವನ್ನು ಮಂಡಿಸುತ್ತಾರೆ. ನನ್ನ ಮಟ್ಟಿಗೆ, ಇಸಿಐನ ಅಂತಿಮ ನಿರ್ಧಾರವನ್ನು ನಾನು ಒಪ್ಪಿಕೊಳ್ಳುತ್ತೇನೆ' ಎಂದು ಅವರು ಹೇಳಿದರು.

ಮಹಾರಾಷ್ಟ್ರ ಸ್ಪೀಕರ್‌ನಿಂದ 16 ಶಾಸಕರ (ಶಿವಸೇನೆಯ) ಅನರ್ಹಗೊಳಿಸುವ ಸಾಧ್ಯತೆ ಮತ್ತು ಮುಖ್ಯಮಂತ್ರಿಯನ್ನು ಬದಲಾಯಿಸುವ ಸಾಧ್ಯತೆಗಳ ಬಗ್ಗೆ ಕೇಳಿದಾಗ, ಈ ಎಲ್ಲಾ ವರದಿಗಳಿಗೆ ಯಾವುದೇ ಅರ್ಥವಿಲ್ಲ. ಏಕನಾಥ್ ಶಿಂಧೆ ಮುಖ್ಯಮಂತ್ರಿಯಾದ ದಿನದಿಂದಲೂ (ಜೂನ್ 2022 ರಲ್ಲಿ) ಇಂತಹ ವರದಿಗಳು ಕೇಳಿಬರುತ್ತಲೇ ಇವೆ. ಈ ಎಲ್ಲಾ ವರದಿಗಳು ಅರ್ಥಹೀನವಾಗಿವೆ ಎಂದು ಹೇಳಿದರು.

SCROLL FOR NEXT