ದೇಶ

ಕೇಂದ್ರದ ವಿರುದ್ಧ ಪ್ರತಿಭಟನೆ: ವಿಶೇಷ ರೈಲು ನಿರಾಕರಿಸಿದ ನಂತರ, 39 ಬಸ್‌ಗಳಲ್ಲಿ ದೆಹಲಿಗೆ ಹೊರಟ ಟಿಎಂಸಿ ಬೆಂಬಲಿಗರು

Lingaraj Badiger

ಕೋಲ್ಕತ್ತಾ: ವಿಶೇಷ ರೈಲಿಗೆ ರೈಲ್ವೆ ಅಧಿಕಾರಿಗಳು ಅನುಮತಿ ನಿರಾಕರಿಸಿದ ನಂತರ, ಕೇಂದ್ರದ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ 2,000 ಉದ್ಯೋಗ ಕಾರ್ಡ್ ಹೊಂದಿರುವವರನ್ನು ಹೊತ್ತ 39 ಬಸ್‌ಗಳು ಶನಿವಾರ ಕೋಲ್ಕತ್ತಾದಿಂದ 1,600 ಕಿ.ಮೀ.ದೂರದ ರಾಷ್ಟ್ರ ರಾಜಧಾನಿಗೆ ತೆರಳುತ್ತಿವೆ.

ಬಂಗಾಳಕ್ಕೆ ನೀಡಬೇಕಾದ ಹಣವನ್ನು ಕೇಂದ್ರ ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಟಿಎಂಸಿ ದೆಹಲಿಯಲ್ಲಿ ಎರಡು ದಿನಗಳ ಕಾಲ ಪ್ರತಿಭಟನೆ ಆಯೋಜಿಸಿದೆ.

ಇಂದು ದೆಹಲಿಗೆ ಹೆಚ್ಚಿನ ಬಸ್‌ಗಳು ಹೊರಡಲಿವೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಟಿಎಂಸಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಅವರು ವಿಶೇಷ ರೈಲಿಗೆ ಅನುಮತಿ ನೀಡದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಪ್ರತಿಭಟನೆ ಶಸ್ವಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ.

“ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಸರ್ಕಾರ ನಮ್ಮ ಬೆಂಬಲಿಗರು ಪ್ರಯಾಣಿಸುತ್ತಿರುವ ಬಸ್‌ಗಳನ್ನು ತಡೆಯಲು ಪ್ರಯತ್ನಿಸಿದರೆ, ಬಂಗಾಳದ ಜನ ಮುಂಬರುವ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ತಕ್ಕ ಉತ್ತರ ನೀಡುತ್ತಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಬಂಗಾಳದ ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದು ಅಭಿಷೇಕ್ ಬ್ಯಾನರ್ಜಿ ಆರೋಪಿಸಿದ್ದಾರೆ.

SCROLL FOR NEXT