ಪ್ರಿಯತಮಗೆ ಗುಂಡು ಹಾರಿಸಿದ ಭಗ್ನ ಪ್ರೇಮಿ
ಪ್ರಿಯತಮಗೆ ಗುಂಡು ಹಾರಿಸಿದ ಭಗ್ನ ಪ್ರೇಮಿ 
ದೇಶ

'Love triangle' ends in tragedy: ಪ್ರೀತಿ ನಿರಾಕರಿಸಿದ ಪ್ರಿಯತಮೆ, ಆಕೆಯ ಸ್ನೇಹಿತನಿಗೆ ಗುಂಡು ಹಾರಿಸಿ, 'ಭಗ್ನ ಪ್ರೇಮಿ' ತಾನೂ ಆತ್ಮಹತ್ಯೆಗೆ ಶರಣು

Srinivasamurthy VN

ಇಂದೋರ್: ಮಧ್ಯಪ್ರದೇಶದಲ್ಲೊಂದು ತ್ರಿಕೋನ ಪ್ರೇಮಕಥೆ ದುರಂತ ಅಂತ್ಯವಾಗಿದ್ದು, ಪ್ರೀತಿ ನಿರಾಕರಿಸಿದ ಕಾರಣಕ್ಕೇ 'ಭಗ್ನ ಪ್ರೇಮಿ'ಯೊಬ್ಬ ತನ್ನ ಪ್ರಿಯತಮೆ ಮತ್ತು ಆಕೆಯ ಸ್ನೇಹಿತನಿಗೆ ಗುಂಡು ಹಾರಿಸಿ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಗುರುವಾರ ಮಧ್ಯಾಹ್ನ ಮಧ್ಯಪ್ರದೇಶದ (Madhya Pradesh) ಇಂದೋರ್‌ನ ಭನ್ವಾರ್ಕುವಾನ್‌ನಲ್ಲಿರುವ ಸ್ವಾಮಿ ನಾರಾಯಣ ಮಂದಿರ (swaminarayan temple) ಕ್ಯಾಂಪಸ್‌ನಲ್ಲಿ ಈ ಧಾರುಣ ಘಟನೆ ನಡೆದಿದ್ದು, ಅಭಿಷೇಕ್ ಯಾದವ್ (26 ವರ್ಷ) ಎಂಬ ಭಗ್ನ ಪ್ರೇಮಿ, ಸ್ನೇಹಲತಾ ಜಾಟ್ (22 ವರ್ಷ) ಮತ್ತು ಅವಳ ಸ್ನೇಹಿತ ದೀಪಕ್ ಜಾಟ್ (25 ವರ್ಷ) ಎಂಬುವವರ ಮೇಲೆ ಗುಂಡು ಹಾರಿಸಿದ್ದಾನೆ. ಇಬ್ಬರ ಮೇಲೆ ಗುಂಡು ಹಾರಿಸಿದ ಬಳಿಕ ಸ್ವಲ್ಪದೂರ ಹೋಗಿ ತಾನೂ ಕೂಡ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಡಲೇ ಮೂವರನ್ನೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದು, ಈ ವೇಳೆ ಹುಡುಗಿ ಸ್ನೇಹಲತಾ ಪರಿಸ್ಥಿತಿ ಗಂಭೀರವಾಗಿದ್ದು, ಆಕೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಗುಂಡೇಟು ತಿಂದ ಆಕೆಯ ಸ್ನೇಹಿತ ದೀಪಕ್ ಜಾಟ್ ಮತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಭಗ್ನ ಪ್ರೇಮಿ ಅಭಿಷೇಕ್ ಯಾದವ್ ಇಬ್ಬರೂ ಸಾವಿಗೀಡಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಸ್ತುತ ಸಂತ್ರಸ್ಥ ಯುವತಿಯನ್ನು ಇಂದೋರ್ (Indore) ನ ಆ್ಯಪಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಸ್ವಾಮಿ ನಾರಾಯಣ ದೇವಸ್ಥಾನದ ಆವರಣದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಯುವತಿ ಮತ್ತು ಆಕೆಯ ಸ್ನೇಹಿತ ದರ್ಶನಕ್ಕೆ ಬಂದಿದ್ದರು. ಆಗಲೇ ಇನ್ನೊಬ್ಬ ಯುವಕ (ಅಭಿಷೇಕ್ ಯಾದವ್) ಅಲ್ಲಿಗೆ ಬಂದು ಇಬ್ಬರನ್ನೂ ಒಟ್ಟಿಗೆ ನೋಡಿ ಆಕ್ರೋಶದಿಂದ ಇಬ್ಬರಿಗೂ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಅಭಿಷೇಕ್ ಯಾದವ್ ಸ್ನೇಹಲತಾಳನ್ನು ಪ್ರೀತಿಸುತ್ತಿದ್ದ. ಆದರೆ ಸ್ನೇಹಲತಾ ಮಾತ್ರ ಆತನ ಪ್ರೇಮ ನಿರಾಕರಿಸಿದ್ದಳು ಎಂದು ಹೇಳಲಾಗಿದೆ. ದೇಗುಲದಲ್ಲಿ ಇಬ್ಬರನ್ನೂ ಒಟ್ಟಿಗೆ ನೋಡಿ ಆಕ್ರೋಶದಿಂದ ಭಗ್ನ ಪ್ರೇಮಿ ಇಬ್ಬರ ಮೇಲೂ ಗುಂಡು ಹಾರಿಸಿದ್ದಾನೆ.

ನಂತರ ಅಭಿಷೇಕ್ ಯಾದವ್ ಘಟನಾ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಸಮೀಪದ ಅರಿಹಂತ್ ಕಾಲೇಜು ಕ್ಯಾಂಪಸ್‌ಗೆ ಬಂದು ಸೆಕ್ಯುರಿಟಿ ಗಾರ್ಡ್‌ ಕುಡಿಯಲು ನೀರು ಕೇಳಿದ್ದಾನೆ. ಆದರೆ ಬಳಿಕ ಸಿಕ್ಕಿ ಬೀಳುವ ಭಯದಿಂದ ತಾನೂ ಬದುಕಲು ಸಾಧ್ಯವಿಲ್ಲ ಎಂದು ಭಾವಿಸಿ ಅದೇ ಪಿಸ್ತೂಲಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

SCROLL FOR NEXT