ಕಣ್ಣೂರು: ಕೇರಳದ ಕಣ್ಣೂರು ಜಿಲ್ಲೆಯ ಪಾನೂರಿನ ಬಳಿ ಶುಕ್ರವಾರ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಶನಿವಾರ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿನ್ನೆ ಸಂಭವಿಸಿದ ಸ್ಫೋಟದಲ್ಲಿ ಒಬ್ಬರು ಮೃತಪಟ್ಟಿದ್ದು, ಮೂವರಿಗೆ ಗಾಯಗಳಾಗಿವೆ. ಬಂಧಿತ ಆರೋಪಿಗಳು, ಮೂವರು ಗಾಯಗೊಂಡವರು ಮತ್ತು ಮೃತಪಟ್ಟ ವ್ಯಕ್ತಿ ಎಲ್ಲರೂ ಸಿಪಿಐ-ಎಂ ಕಾರ್ಯಕರ್ತರು ಅಥವಾ ಬೆಂಬಲಿಗರು ಎಂದು ಪೊಲೀಸರು ಹೇಳಿದ್ದಾರೆ. ಇದನ್ನು ಎಡಪಕ್ಷಗಳು ನಿರಾಕರಿಸಿವೆ.
ದೇಶಿ ನಿರ್ಮಿತ ಬಾಂಬ್ ಸ್ಫೋಟಗೊಂಡಾಗ ಸ್ಥಳದಲ್ಲಿದ್ದ ಶೆಬಿನ್ ಲಾಲ್, ಕೆ ಅತುಲ್, ಕೆ ಕೆ ಅರುಣ್ ಮತ್ತು ಸಾಯೂಜ್ ಅವರನ್ನು ಬಂಧಿಸಲಾಗಿದೆ ಎಂದು ಪಾನೂರು ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಕ್ಕದ ತಮಿಳುನಾಡಿನ ಕೊಯಮತ್ತೂರಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ಸಾಯೂಜ್ ನನ್ನು ಪಾಲಕ್ಕಾಡ್ನಲ್ಲಿ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಫೋಟದಲ್ಲಿ ಗಾಯಗೊಂಡಿರುವ ಇತರ ಮೂವರು - ವಿನೀಶ್, ವಿನೋದ್ ಮತ್ತು ಅಶ್ವಂತ್ ಕೂಡ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಸಿಪಿಐ-ಎಂ ರಾಜ್ಯ ಕಾರ್ಯದರ್ಶಿ ಎಂವಿ ಗೋವಿಂದನ್ ಮಾತನಾಡಿ, ಘಟನೆಯಲ್ಲಿ ಭಾಗಿಯಾಗಿರುವವರು ಈ ಹಿಂದೆ ಪಕ್ಷದ ಸದಸ್ಯರ ಮೇಲೆ ಹಲ್ಲೆ ನಡೆಸಿದ್ದರಿಂದ ಪಕ್ಷಕ್ಕೂ, ಅವರಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.