ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್  
ದೇಶ

ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಮೇಲ್ಮನವಿ: ಏಪ್ರಿಲ್ 15 ರಂದು ಸುಪ್ರೀಂ ಕೋರ್ಟ್ ವಿಚಾರಣೆ

Lingaraj Badiger

ನವದೆಹಲಿ: ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಮ್ಮ ಬಂಧನ ಮತ್ತು ರಿಮಾಂಡ್ ವಿರುದ್ಧದ ಅರ್ಜಿಯನ್ನು ವಜಾಗೊಳಿಸಿದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲ್ಲಿಸಿರುವ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಏಪ್ರಿಲ್ 15 ರಂದು ವಿಚಾರಣೆ ನಡೆಸಲಿದೆ.

ಆದಾಗ್ಯೂ, ಕೇಜ್ರಿವಾಲ್ ಅವರ ಮೇಲ್ಮನವಿ ಆಲಿಸುವ ನ್ಯಾಯಾಧೀಶರು ಯಾರು ಎಂದು ಸುಪ್ರೀಂ ಕೋರ್ಟ್ ಇನ್ನೂ ನಿರ್ಧರಿಸಿಲ್ಲ.

ಕಳೆದ ಮಂಗಳವಾರ ದೆಹಲಿ ಹೈಕೋರ್ಟ್, ಬಂಧನ ಪ್ರಶ್ನಿಸಿ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯವನ್ನು ವಜಾಗೊಳಿಸಿತ್ತು. ಒಂದು ದಿನದ ನಂತರ, ಕೇಜ್ರಿವಾಲ್ ಅವರು ಬುಧವಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೆ ತಮ್ಮ ಮೇಲ್ಮನವಿಯನ್ನು ಆದಷ್ಟು ಬೇಗ ವಿಚಾರಣೆಗೆ ಪಟ್ಟಿ ಮಾಡುವಂತೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಮಾರ್ಚ್ 21 ರ ರಾತ್ರಿ ಕೇಜ್ರಿವಾಲ್ ಅವರನ್ನು ಬಂಧಿಸಿದ್ದರು. ಮಾರ್ಚ್ 22 ರಂದು ವಿಚಾರಣಾ ನ್ಯಾಯಾಲಯವು ಅವರನ್ನು ಆರು ದಿನಗಳ ಇಡಿ ಕಸ್ಟಡಿಗೆ ನೀಡಿತು. ಅದನ್ನು ಇನ್ನೂ ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು. ಏಪ್ರಿಲ್ 1 ರಂದು ಅವರನ್ನು ಏಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಯಿತು.

ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವ ಕೇಜ್ರಿವಾಲ್, ತನ್ನ ಬಂಧನದ ಸಮಯವು ಚುನಾವಣೆಗೆ ಮುನ್ನ ತಮ್ಮ ಪಕ್ಷವನ್ನು 'ಹಾಳು ಮಾಡುವ' ಪ್ರಯತ್ನ ಎಂದು ವಿಚಾರಣೆಯ ಸಂದರ್ಭದಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದರು.

SCROLL FOR NEXT