ಅರವಿಂದ್ ಕೇಜ್ರಿವಾಲ್
ಅರವಿಂದ್ ಕೇಜ್ರಿವಾಲ್ 
ದೇಶ

Arvind Kejriwal ಕಳ್ಳಾಟ? ಶುಗರ್ ಹೆಚ್ಚಿಸಿಕೊಂಡು ಜಾಮೀನು ಪಡೆಯಲು ಜೈಲಲ್ಲಿ ಹೆಚ್ಚು ಮಾವು, ಸಿಹಿ ಸೇವನೆ: ED ಆರೋಪ

Srinivasamurthy VN

ನವದೆಹಲಿ: ಅಬಕಾರಿ ಪ್ರಕರಣದಲ್ಲಿ ಜೈಲುಪಾಲಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಶತಾಯಗತಾಯ ಜಾಮೀನು ಪಡೆಯಲು ಜೈಲಲ್ಲಿ ಮಾವು, ಸಿಹಿ ತಿನಿಸುಗಳನ್ನು ತಿನ್ನುವ ಮೂಲಕ ಬೇಕಂತಲೇ 'ಶುಗರ್' ಹೆಚ್ಚಿಸಿಕೊಳ್ಳಲು ಯತ್ನಿಸಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಗಂಭೀರ ಆರೋಪ ಮಾಡಿದೆ.

ಅರವಿಂದ್ ಕೇಜ್ರಿವಾಲ್ ಗೆ ಸಕ್ಕರೆ ಖಾಯಿಲೆ ಇದ್ದು, ಇವರು ಜೈಲಲ್ಲಿ ಉದ್ದೇಶಪೂರ್ವಕವಾಗಿಯೇ ಟೀ ಸಮಯದಲ್ಲಿ ಮಾವು, ಸಿಹಿ ತಿನಿಸುಗಳನ್ನು ಯಥೇಚ್ಛವಾಗಿ ತಿನ್ನುತ್ತಿದ್ದಾರೆ. ಇಷ್ಟು ದಿನ ಸಕ್ಕರೆ ರಹಿತ ಚಹಾ ಸೇವಿಸುತ್ತಿದ್ದ ಕೇಜ್ರಿವಾಲ್ ಈಗ ಸಕ್ಕರೆ ಸಹಿತ ಚಹಾ ಕುಡಿಯುತ್ತಿದ್ದಾರೆ. ಇದರಿಂದ ತಮ್ಮ ದೇಹದಲ್ಲಿನ ರಕ್ತದ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಂಡು ವೈದ್ಯಕೀಯ ಪರಿಸ್ಥಿತಿ ಆಧಾರದಲ್ಲಿ ಜಾಮೀನು ಪಡೆಯುವ ಉದ್ದೇಶ ಅವರದ್ದಾಗಿದೆ ಎಂದು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದೆಹಲಿ ಕೋರ್ಟ್ ಗೆ ಗುರುವಾರ ಮಾಹಿತಿ ನೀಡಿದ್ದಾರೆ.

ಕೇಜ್ರಿವಾಲ್ ತಮ್ಮ ಸಕ್ಕರೆ ಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಲು ಮತ್ತು ವೀಡಿಯೊ ಕಾನ್ಫರೆನ್ಸ್ ಮೂಲಕ ತಮ್ಮ ನಿಯಮಿತ ವೈದ್ಯರೊಂದಿಗೆ ಸಮಾಲೋಚಿಸಲು ಕೇಜ್ರಿವಾಲ್ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರ ಮುಂದೆ ಇಡಿ ವಕೀಲ ಜೊಹೆಬ್ ಹೊಸೈನ್ ಅವರು ವಾದ ಮಂಡಿಸಿದ್ದಾರೆ.

ಅಬಕಾರಿ ನೀತಿ ಪ್ರಕರಣದಿಂದಾಗಿ ಕೇಜ್ರಿವಾಲ್ ಅವರು ನ್ಯಾಯಾಂಗದ ವಶದಲ್ಲಿದ್ದಾರೆ. ಆತಂಕಕಾರಿ ವಿಚಾರವೆಂದರೆ ಅವರಿಗೆ ಮಧುಮೇಹ ಖಾಯಿಲೆ ಇದ್ದು, ಅವರಿಗೆ ನ್ಯಾಯಾಲಯದ ಅನುಮತಿ ಮೇರೆಗೆ ಮನೆಯಿಂದ ಬೇಯಿಸಿದ ಆಹಾರ ನೀಡಲಾಗುತ್ತಿದೆ.

ಇದಾಗ್ಯೂ ಕೇಜ್ರಿವಾಲ್ ಅವರು ಮಾವಿನಹಣ್ಣು, ಸಿಹಿತಿಂಡಿಗಳು ಮತ್ತು ಸಕ್ಕರೆ ಸಹಿತ ಚಹಾವನ್ನು ಸೇವಿಸುತ್ತಿದ್ದಾರೆ. ಜಾಮೀನು ಪಡೆಯಲು ಇದು ಒಂದು ತಂತ್ರಗಾರಿಕೆಯಾಗಿದೆ. ಇಡಿ ಅಧಿಕಾರಿಗಳು ತಿಹಾರ್ ಜೈಲಿಗೆ ಪತ್ರ ಬರೆದು ಕೇಜ್ರಿವಾಲ್ ಅವರ ಆಹಾರ ಮತ್ತು ಅವರು ಸೇವಿಸುವ ಔಷಧಿಗಳ ಬಗ್ಗೆ ಮಾಹಿತಿ ಕೇಳಿದಾಗ ವಿವರಗಳು ತಿಳಿದುಬಂದವು ಎಂದು ಹೊಸೈನ್ ಹೇಳಿದರು.

ಮಾಧ್ಯಮಗಳಿಗಾಗಿ ಇಡಿ ವಾದ

ಕೇಜ್ರಿವಾಲ್ ಪರ ವಾದ ಮಂಡಿಸಿದ ವಕೀಲ ವಿವೇಕ್ ಜೈನ್ ಅವರು, ಇಡಿ ಸಲ್ಲಿಸಿರುವ ಸಲ್ಲಿಕೆಗಳಿಗೆ ಆಕ್ಷೇಪ ವ್ಯಕ್ತಪಡಿಸಿದರು. 'ಜಾರಿ ನಿರ್ದೇಶನಾಲಯ ಈ ಆರೋಪಗಳನ್ನು ಕೇವಲ ಮಾಧ್ಯಮಗಳಿಗಾಗಿ ಮಾಡುತ್ತಿದೆ. ಅಲ್ಲದೆ ತಾವು ಹಾಲಿ ಸಲ್ಲಿಸಿರುವ ಅರ್ಜಿಯನ್ನು ಹಿಂಪಡೆದು, ಹೊಸ ಅರ್ಜಿ ಸಲ್ಲಿಸುವುದಾಗಿ ಹೇಳಿದರು.

ಅಂದಹಾಗೆ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಪ್ರಸ್ತುತ ತಿಹಾರ್ ಜೈಲಿನಲ್ಲಿದ್ದಾರೆ. ಈ ಹಿಂದಿನ ವಿಚಾರಣೆಯಲ್ಲಿ ರೂಸ್ ಅವೆನ್ಯೂ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದ ಕೇಜ್ರಿವಾಲ್ ಪರ ವಕೀಲರು, 'ಕೇಜ್ರಿವಾಲ್ ಸಕ್ಕರೆ ಪ್ರಮಾಣ 46ಕ್ಕೆ ಇಳಿದಿದ್ದು, ನಿರಂತರವಾಗಿ ಏರುಪೇರಾಗುತ್ತಿದೆ. ಅವರಿಗೆ ವೈದ್ಯರ ಸಲಹೆ ಅತ್ಯಗತ್ಯವಾಗಿದೆ ಎಂದು ಹೇಳಿದ್ದರು. ಕೇಜ್ರಿವಾಲ್ ಅವರ ಡಯಟ್ ಚಾರ್ಟ್ ಬಗ್ಗೆ ಕೋರ್ಟ್ ಇಂದು ತಿಹಾರ್ ಜೈಲಿನಿಂದ ವರದಿ ಕೇಳಿದೆ.

SCROLL FOR NEXT