ಸಿಎಂ ಜಗನ್ ಮೋಹನ್ ರೆಡ್ಡಿ
ಸಿಎಂ ಜಗನ್ ಮೋಹನ್ ರೆಡ್ಡಿ 
ದೇಶ

ಆಂಧ್ರಪ್ರದೇಶ: ಸಿಎಂ ಜಗನ್ ಮೋಹನ್ ರೆಡ್ಡಿ ಮೇಲೆ ಕಲ್ಲೆಸೆದ ಯುವಕನಿಗೆ ನ್ಯಾಯಾಂಗ ಬಂಧನ

Nagaraja AB

ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರ ಮೇಲೆ ಕಲ್ಲೆಸೆದ ಯುವಕನನ್ನು ವಿಜಯವಾಡ ನ್ಯಾಯಾಲಯ ಗುರುವಾರ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ.

ಪೊಲೀಸರು ಆರೋಪಿ ಸತೀಶ್ ನನ್ನು ಪ್ರಧಾನ ಕಿರಿಯ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮೇ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಏಪ್ರಿಲ್ 13 ರಂದು ವಿಜಯವಾಡದಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದು ಮೊದಲ ಬಂಧನವಾಗಿದೆ. ನಗರದ ವಡ್ಡರ ಕಾಲೋನಿ ನಿವಾಸಿಯಾಗಿರುವ ಸತೀಶ್, ಅಜಿತ್ ಸಿಂಗ್ ನಗರದ ದಬಕೊಟ್ಲು ಸೆಂಟರ್ ನಲ್ಲಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಮೇಲೆ ಕಲ್ಲು ಎಸೆದಿದ್ದ.ಜಗನ್ ಮೋಹನ್ ರೆಡ್ಡಿ ಅವರ ಕಣ್ಣಿನ ಹುಬ್ಬಿನ ಮೇಲೆ ಗಾಯವಾಗಿತ್ತು. ಅವರ ಪಕ್ಕದಲ್ಲಿ ನಿಂತಿದ್ದ ವೈಎಸ್‌ಆರ್‌ಸಿಪಿ ಶಾಸಕ ವೇಲಂಪಲ್ಲಿ ಶ್ರೀನಿವಾಸ ರಾವ್ ಅವರ ಕಣ್ಣಿಗೂ ಗಾಯವಾಗಿತ್ತು. ಅದೇ ರಾತ್ರಿ ಇಬ್ಬರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು.

ಶಾಸಕರು ನೀಡಿದ ದೂರಿನ ಮೇರೆಗೆ ಮರುದಿನ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಕೊಲೆ ಯತ್ನವನ್ನು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದರು.ಪ್ರಕರಣದ ಹಲವು ಶಂಕಿತರನ್ನು ವಿಚಾರಣೆಗೆ ಒಳಪಡಿಸಿದ ಪೊಲೀಸರು, ದಿನಗೂಲಿ ಕಾರ್ಮಿಕ ಸತೀಶ್ ನನ್ನು ಬಂಧಿಸಿದ್ದರು. ಇನ್ನಾವುದೇ ವ್ಯಕ್ತಿ ಭಾಗಿಯಾಗಿದ್ದಾರೆಯೇ ಮತ್ತು ದಾಳಿಯ ಹಿಂದಿನ ಉದ್ದೇಶವನ್ನು ಕಂಡುಹಿಡಿಯಲು ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

SCROLL FOR NEXT