ವಯನಾಡು ಭೂ ಕುಸಿತ ರಕ್ಷಣಾ ಕಾರ್ಯಾಚರಣೆ 
ದೇಶ

Wayanad landslide: ಸಾವಿನ ಸಂಖ್ಯೆ 340ಕ್ಕೆ ಏರಿಕೆ, ರಕ್ಷಣಾ ಕಾರ್ಯಾಚರಣೆ ಆರನೇ ದಿನಕ್ಕೆ

ವಯನಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಹರಿಯುವ ಚಾಲಿಯಾರ್ ನದಿಯ 40 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಸಚಿವ ರಿಯಾಸ್ ಹೇಳಿದ್ದಾರೆ.

ತಿರುವನಂತಪುರಂ: ಕೇರಳದ ವಯನಾಡು ಭೂಕುಸಿತ ಪ್ರಕರಣದಲ್ಲಿ ಸಾವನ್ನಪ್ಪಿದವರ ಸಂಖ್ಯೆ 340 ದಾಟಿದ್ದು, ರಕ್ಷಣಾ ಕಾರ್ಯಾಚರಣೆ 6ನೇ ದಿನಕ್ಕೆ ಕಾಲಿಟ್ಟಿದೆ.

ಉತ್ತರ ಕೇರಳ ಜಿಲ್ಲೆ ವಯನಾಡಿನಲ್ಲಿ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ಆರನೇ ದಿನವೂ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮೃತದೇಹಗಳನ್ನು ಹೊರತೆಗೆಯುವ ಸಾಧ್ಯತೆ ಹೆಚ್ಚಿರುವ ಸ್ಥಳಗಳಲ್ಲಿ ಹೆಚ್ಚಿನ ಬಲ ಮತ್ತು ಉಪಕರಣಗಳನ್ನು ನಿಯೋಜಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಭಾನುವಾರ ತಿಳಿಸಿದ್ದಾರೆ.

ಅಧಿಕೃತ ದಾಖಲೆಗಳ ಪ್ರಕಾರ, ಮುಂಡಕ್ಕೈ ಮತ್ತು ಚೂರಲ್ಮಲಾದಿಂದ 206 ಜನರು ಇನ್ನೂ ಕಾಣೆಯಾಗಿದ್ದಾರೆ. ಅಂತೆಯೇ ಇಲ್ಲಿ ಸಾವಿನ ಸಂಖ್ಯೆ 240 ದಾಟಿದೆ ಎಂದು ಹೇಳಲಾಗಿದೆ. ಸುಧಾರಿತ ರಾಡಾರ್‌ಗಳು, ಡ್ರೋನ್‌ಗಳು ಮತ್ತು ಭಾರೀ ಯಂತ್ರೋಪಕರಣಗಳನ್ನು ರಕ್ಷಣಾ ತಂಡಗಳು ಬಳಸುತ್ತಿವೆ. ವಯನಾಡ್, ಮಲಪ್ಪುರಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳಲ್ಲಿ ಹರಿಯುವ ಚಾಲಿಯಾರ್ ನದಿಯ 40 ಕಿಲೋಮೀಟರ್ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಸಚಿವ ರಿಯಾಸ್ ಹೇಳಿದ್ದಾರೆ.

ಮಲಪ್ಪುರಂನ ನಿಲಂಬೂರ್ ಬಳಿ ಹಲವು ಮೃತದೇಹಗಳು ಮತ್ತು ಅವಶೇಷಗಳು ಪತ್ತೆಯಾಗಿವೆ. ನೌಕಾಪಡೆ, ಪೊಲೀಸ್, ಅಗ್ನಿಶಾಮಕ ಮತ್ತು ರಕ್ಷಣಾ ತಂಡಗಳು ಮತ್ತು ಎನ್‌ಡಿಆರ್‌ಎಫ್ ಸೇರಿದಂತೆ ವಿವಿಧ ಏಜೆನ್ಸಿಗಳ ಸಾಹಸದಿಂದಾಗಿ ಸ್ಥಳೀಯ ನಿವಾಸಿಗಳೊಂದಿಗೆ ಸೇರಿ ಶನಿವಾರ ನದಿಯಿಂದ ಇನ್ನೂ ಮೂರು ದೇಹಗಳು ಮತ್ತು 13 ದೇಹದ ಭಾಗಗಳನ್ನು ವಶಪಡಿಸಿಕೊಂಡಿವೆ.

ಆ ಮೂಲಕ ಚಾಲಿಯಾರ್ ನದಿಯಲ್ಲಿ ಪತ್ತೆಯಾದ ಒಟ್ಟು ದೇಹಗಳ ಸಂಖ್ಯೆ 73ಕ್ಕೆ ಏರಿಕೆಯಾಗಿದ್ದು, ದೇಹದ ಭಾಗಗಳ ಸಂಖ್ಯೆ 132ಕ್ಕೆ ಏರಿಕೆಯಾಗಿದೆ. ಪತ್ತೆಯಾದ ಮೃತದೇಹಗಳಲ್ಲಿ 37 ಪುರುಷರು, 29 ಮಹಿಳೆಯರು, 3 ಬಾಲಕರು ಮತ್ತು 4 ಹುಡುಗಿಯರು ಇದ್ದಾರೆ ಎಂದು ಮಲಪ್ಪುರಂ ಜಿಲ್ಲೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಲಾಗಿದ್ದು, ಎನ್‌ಡಿಆರ್‌ಎಫ್, ಕೆ-9 ಶ್ವಾನದಳ, ಸೇನೆ, ವಿಶೇಷ ಕಾರ್ಯಾಚರಣೆ ಗುಂಪು, ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್, ಪೊಲೀಸ್, ಅಗ್ನಿಶಾಮಕ ದಳ, ಅರಣ್ಯ ಇಲಾಖೆ, ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್ ಸೇರಿದಂತೆ ವಿವಿಧ ಪಡೆಗಳ ನೂರಾರು ಸಿಬ್ಬಂದಿಯನ್ನು ವಯನಾಡಿನ ವಿಪತ್ತು ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ. ಹುಡುಕಾಟ ಮತ್ತು ಪಾರುಗಾಣಿಕಾ ಕ್ಷೇತ್ರದಲ್ಲಿ ಪರಿಣತಿ ಹೊಂದಿರುವ ಖಾಸಗಿ ಕಂಪನಿಗಳು ಮತ್ತು ಸ್ವಯಂಸೇವಕರು ಸಹ ಕಾರ್ಯಾಚರಣೆಗೆ ಸೇರಿಕೊಂಡಿದ್ದಾರೆ.

ಭೂಕುಸಿತದಿಂದ ಧ್ವಂಸಗೊಂಡಿರುವ ಮುಂಡಕ್ಕೈ ಮತ್ತು ಚೂರಲ್‌ಮಲಾ ಪ್ರದೇಶಗಳಲ್ಲಿ ಆರು ಶೋಧನಾ ವಲಯಗಳಾಗಿ ವಿಂಗಡಿಸಲಾಗಿದ್ದು, ಕಳೆದ ಕೆಲವು ದಿನಗಳಂತೆಯೇ ಕಾರ್ಯಾಚರಣೆಯು ಮುಂದುವರಿಯಲಿದ್ದು, ಅವಶೇಷಗಳಡಿಯಲ್ಲಿ ಪತ್ತೆಯಾಗುವ ಸಾಧ್ಯತೆಗಳಿರುವ ಸ್ಥಳಗಳಿಗೆ ಹೆಚ್ಚಿನ ಬಲ ಮತ್ತು ಹೆಚ್ಚು ಉಪಕರಣಗಳನ್ನು ನಿಯೋಜಿಸಲಾಗಿದೆ ಎಂದು ಸಚಿವರು ಟಿವಿ ಚಾನೆಲ್‌ಗೆ ತಿಳಿಸಿದ್ದಾರೆ.

ಅಂತೆಯೇ ಬದುಕುಳಿದವರ ಪುನರ್ವಸತಿಗೆ ಸಂಬಂಧಿಸಿದಂತೆ, ಎಲ್ಲರೊಂದಿಗೆ ಚರ್ಚೆ ನಡೆಸಬೇಕಾಗಿದೆ, ವಿಶೇಷವಾಗಿ ಪರಿಹಾರ ಶಿಬಿರಗಳಲ್ಲಿ ವಾಸಿಸುವ ಮತ್ತು ಆಸ್ಪತ್ರೆಗಳಿಗೆ ದಾಖಲಾಗಿರುವವರಿಗಾಗಿ ಕ್ರಮ ಕೈಗೊಳ್ಳಬೇಕಿದೆ. ನಿರಾಶ್ರಿತ ಶಿಬಿರಗಳು ಮತ್ತು ಆಸ್ಪತ್ರೆಗಳಲ್ಲಿರುವವರ ಅಭಿಪ್ರಾಯಗಳಿಗೆ ಆದ್ಯತೆ ನೀಡಲಾಗುವುದು.

ಗುರುತಿನ ಮತ್ತು ಇತರ ಪ್ರಮುಖ ದಾಖಲೆಗಳನ್ನು ಕಳೆದುಕೊಂಡವರಿಗೆ ಸಹಾಯ ಮಾಡಲು ತಕ್ಷಣದ ಮಧ್ಯಸ್ಥಿಕೆಗಳನ್ನು ಕೈಗೊಳ್ಳಲಾಗುವುದು.ಭೂಕುಸಿತ ಪೀಡಿತ ಪ್ರದೇಶಗಳಲ್ಲಿನ ಮಕ್ಕಳ ಶಿಕ್ಷಣಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿಯಾಗದಂತೆ ನೋಡಿಕೊಳ್ಳಲು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಜಿಲ್ಲಾಡಳಿತದ ಪ್ರಕಾರ, ಶನಿವಾರ ರಾತ್ರಿಯವರೆಗೆ, 219 ಶವಗಳು ಮತ್ತು 143 ದೇಹದ ಭಾಗಗಳು ಪತ್ತೆಯಾಗಿದ್ದು, 206 ಮಂದಿ ನಾಪತ್ತೆಯಾಗಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಹೌದು, ನಾನು ಜೀವಂತವಾಗಿದ್ದೇನೆ': ಅಮೆರಿಕದ ರಾಯಭಾರಿಯೊಂದಿಗಿರುವ ಹೊಸ ವಿಡಿಯೋ ಹಂಚಿಕೊಂಡ ಇಸ್ರೇಲ್ ಪ್ರಧಾನಿ!

ಇರಾನ್ ವಾರ್ನಿಂಗ್ ಬೆನ್ನಲ್ಲೇ 'ಕಚ್ಚಾ ತೈಲ' ಮತ್ತಷ್ಟು ದುಬಾರಿ! ಪ್ರತಿ ಬ್ಯಾರೆಲ್ ಗೆ 103 ಡಾಲರ್ ಏರಿಕೆ!

ಬೆಂಗಳೂರು: ಜೀವಂತ ತಂದೆಯನ್ನೇ ಗೋಣಿ ಚೀಲದಲ್ಲಿ ತುಂಬಿ ಕೊರಿಯರ್ ಗೆ ಯತ್ನಿಸಿದ ಮಹಿಳೆ!ಮುಂದೇನಾಯ್ತು? ಈ Video ನೋಡಿ...

UAE ಅಧ್ಯಕ್ಷರೊಂದಿಗೆ ಪ್ರಧಾನಿ ಮೋದಿ ಮಾತುಕತೆ: ಪಶ್ಚಿಮ ಏಷ್ಯಾದಲ್ಲಿನ ಉದ್ವಿಗ್ನತೆ ಕುರಿತು ಚರ್ಚೆ!

ನಿಮ್ಮ ಉದಾಸೀನ ಪ್ರವೃತಿಯಿಂದ ಸರ್ಕಾರಕ್ಕೆ ಮುಜುಗರ: ಸಚಿವರು-ಅಧಿಕಾರಿಗಳ ವಿರುದ್ಧ ಸಿಎಂ ಗರಂ, ಉತ್ತರಿಸುವಂತೆ ಖಡಕ್ ಸೂಚನೆ

SCROLL FOR NEXT