ಜೈಪುರ: ರಾಜಸ್ಥಾನದ ದೌಸಾದಲ್ಲಿ 150 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಐದು ವರ್ಷದ ಆರ್ಯನ್ ಜೀವನ್ಮರಣ ಹೋರಾಟದಲ್ಲಿ ಸಾವನ್ನಪ್ಪಿದೆ.
55 ಗಂಟೆಗೂ ಹೆಚ್ಚು ಕಾಲ ನಡೆದ ರಕ್ಷಣಾ ಕಾರ್ಯಾಚರಣೆಯ ನಂತರ ನಿನ್ನೆ ರಾತ್ರಿ ಆತನನ್ನು ಕೊಳವೆಬಾವಿಯಿಂದ ಹೊರ ತೆಗೆದು, ಆಂಬ್ಯುಲೆನ್ಸ್ನಲ್ಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
'ಸುಧಾರಿತ ಜೀವರಕ್ಷಕ ವ್ಯವಸ್ಥೆ ಹೊಂದಿದ್ದ ಆಂಬ್ಯುಲೆನ್ಸ್ನಲ್ಲಿ ಮಗುವನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಅಲ್ಲಿ ಮೃತಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಸೋಮವಾರ ಮಧ್ಯಾಹ್ನ 3 ಗಂಟೆಗೆ ಕಾಲಿಖಾಡ್ ಗ್ರಾಮದಲ್ಲಿ ಕೃಷಿ ಭೂಮಿಯೊಂದರಲ್ಲಿ ಆಟವಾಡುತ್ತಿದ್ದ ಆರ್ಯನ್ ಆಕಸ್ಮಿಕವಾಗಿ ತಾಯಿ ಎದುರಿನ ಕೊಳವೆ ಬಾವಿಯಲ್ಲಿ ಬಿದ್ದಿದ್ದ. ಒಂದು ಗಂಟೆಯ ನಂತರ ರಕ್ಷಣಾ ಕಾರ್ಯಾಚರಣೆ ಆರಂಭವಾಯಿತು. ಸ್ಥಳಕ್ಕೆ ಧಾವಿಸಿದ ರಕ್ಷಣಾ ತಂಡ ಪೈಪ್ ಮೂಲಕ ಆಮ್ಲಜನಕ ಪೂರೈಕೆ ಆರಂಭಿಸಿ ಮಗುವಿನ ಚಲನವಲನ ಸೆರೆಹಿಡಿಯಲು ಕ್ಯಾಮರಾ ಇರಿಸಲಾಗಿತ್ತು. ಮಗು ಇದ್ದ ಸ್ಥಳವನ್ನು ತಲುಪಲು ಸಮಾನಾಂತರವಾಗಿ ಗುಂಡಿಯನ್ನು ತೆಗೆಯಲಾಗಿತ್ತು.
ಕಾರ್ಯಾಚರಣೆ ಸಾಕಷ್ಟು ಸವಾಲಾಗಿತ್ತು. ಮಗು ಬಿದ್ದ ಪ್ರದೇಶದಲ್ಲಿ ಸುಮಾರು 160 ಅಡಿಗಳಷ್ಟು ನೀರು ಇತ್ತು. ಯಾವುದೇ ಚಲನವಲನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಕಷ್ಟಕರವಾಗಿತ್ತು ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಿಬ್ಬಂದಿ ತಿಳಿಸಿದ್ದಾರೆ.