ನಾಗ್ಪುರ: ಮಹಾರಾಷ್ಟ್ರದ ನೂತನ ಮಹಾಯುತಿ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ನಿರಾಶೆಗೊಂಡಿರುವ ಎನ್ಸಿಪಿ ಹಿರಿಯ ನಾಯಕ ಛಗನ್ ಭುಜಬಲ್ ಅವರು, ಎಂಟು ದಿನಗಳ ಹಿಂದೆ ನನಗೆ ರಾಜ್ಯಸಭಾ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ ನಾನು ಅದನ್ನು ತಿರಸ್ಕರಿಸಿದೆ ಎಂದು ಮಂಗಳವಾರ ಹೇಳಿದ್ದಾರೆ.
ನಾಸಿಕ್ ಜಿಲ್ಲೆಯ ಯೋಲಾ ಶಾಸಕ ಭುಜಬಲ್ ನಾಗ್ಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದಿರುವ ತನ್ನ ಕ್ಷೇತ್ರದ ಜನತೆಗೆ ದ್ರೋಹ ಬಗೆಯಬಾರದು ಎಂದು ರಾಜ್ಯಸಭಾ ಸ್ಥಾನದ ಆಫರ್ ತಿರಸ್ಕರಿಸಿದ್ದೇನೆ ಎಂದು ತಿಳಿಸಿದರು.
"ಈ ವರ್ಷದ ಆರಂಭದಲ್ಲಿ ನಾನು ರಾಜ್ಯಸಭೆಗೆ ಆಯ್ಕೆಯಾಗಲು ಬಯಸಿದಾಗ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದರು. ಈಗ ಗೆದ್ದ ನಂತರ ಎಂಟು ದಿನಗಳ ಹಿಂದೆ ನನಗೆ ಮತ್ತೆ ರಾಜ್ಯಸಭೆ ಸ್ಥಾನದ ಆಫರ್ ನೀಡಿದರು. ಆದರೆ ಅದನ್ನು ನಾನು ತಿರಸ್ಕರಿಸಿದೆ" ಎಂದು ಮಾಜಿ ಸಚಿವ ಹೇಳಿದ್ದಾರೆ.
ನನಗೆ ಸಚಿವ ಸ್ಥಾನ ನಿರಾಕರಿಸಿದ ನಂತರ ಎನ್ಸಿಪಿ ಮುಖ್ಯಸ್ಥ ಮತ್ತು ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಮಾತನಾಡಿಲ್ಲ ಎಂದು ಭುಜಬಲ್ ಹೇಳಿದರು.
ಪ್ರಮುಖ ಒಬಿಸಿ ನಾಯಕ, ಭುಜಬಲ್ ಅವರು ಮರಾಠ ಸಮುದಾಯಕ್ಕೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿಗಾಗಿ ಒತ್ತಾಯಿಸುತ್ತಿರುವ ಹೋರಾಟಗಾರ ಮನೋಜ್ ಜಾರಂಜ್ ಅವರನ್ನು ಬೆಂಬಲಿಸಿದ್ದಕ್ಕೆ ನನ್ನನ್ನು ಸಂಪುಟದಿಂದ ಹೊರಗಿಡಲಾಗಿದೆ ಎಂದು ಹೇಳಿದ್ದಾರೆ.