ಮುಂಬೈ: ಗೇಟ್ವೇ ಆಫ್ ಇಂಡಿಯಾ ಬಳಿ ಪ್ರಯಾಣಿಕರಿದ್ದ ದೋಣಿಗೆ ಸ್ಪೀಡ್ಬೋಟ್ ಡಿಕ್ಕಿ ಹೊಡೆದಿದ್ದು 13 ಪ್ರಯಾಣಿಕರು ಮೃತಪಟ್ಟಿದ್ದು 101 ಮಂದಿಯನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬ್ಬಂದಿ ಸೇರಿದಂತೆ ಸುಮಾರು 110ಕ್ಕೂ ಹೆಚ್ಚು ಪ್ರವಾಸಿಗರನ್ನು ಹೊತ್ತ ದೋಣಿಯು ಐಕಾನಿಕ್ ಗೇಟ್ವೇ ಆಫ್ ಇಂಡಿಯಾದಿಂದ ಯುನೆಸ್ಕೋ ಪರಂಪರೆಯ ಎಲಿಫೆಂಟಾ ದ್ವೀಪಕ್ಕೆ ತೆರಳುತ್ತಿದ್ದಾಗ ಸಂಜೆ 5.15ರ ಸುಮಾರಿಗೆ ಈ ಘಟನೆ ನಡೆದಿದೆ.
ಮೃತರ ಪೈಕಿ 10 ಮಂದಿ ಪ್ರಯಾಣಿಕರಿದ್ದು ಮೂವರು ನೌಕಾಪಡೆ ಸಿಬ್ಬಂದಿ ಎಂದು ತಿಳಿದುಬಂದಿದೆ. ನೌಕಾಪಡೆಯ ಸ್ಪೀಡ್ ಬೋಟ್ ನ ಎಂಜಿನ್ ಪರೀಕ್ಷೆ ವೇಳೆ ಈ ದುರ್ಘಟನೆ ಸಂಭವಿಸಿದೆ.
ಜಾಯಿಂಟ್ ಆಪರೇಷನ್ ಕಮಾಂಡ್ (ಜೆಒಸಿ) ಮತ್ತು ಬಿಎಂಸಿ ಪ್ರಕಾರ, ಕಾರಂಜಾದ ಉರಾನ್ ಬಳಿ ದೋಣಿ 'ನೀಲ್ಕಮಲ್' ದೋಣಿಗೆ ಸ್ಪೀಡ್ ಬೋಟ್ ಹೊಡೆದಿದೆ. ಇತರ ದೋಣಿಗಳಿಂದ ಪ್ರಯಾಣಿಕರು ಕ್ಲಿಕ್ ಮಾಡಿದ ಅಪಘಾತದ ವೀಡಿಯೊಗಳಲ್ಲಿ, ಜನರು ಸಹಾಯಕ್ಕಾಗಿ ಪ್ರಯತ್ನಿಸುವುದನ್ನು ಕಾಣಬಹುದು. ಸದ್ಯ 101 ಮಂದಿಯನ್ನು ರಕ್ಷಿಸಲಾಗಿದೆ. ದುರಂತದ ಬಗ್ಗೆ ಮಾಹಿತಿ ಪಡೆದ ಭಾರತೀಯ ನೌಕಾಪಡೆಯ ನಾಲ್ಕು ಹೆಲಿಕಾಪ್ಟರ್ಗಳು, ಮೆರೈನ್ ಪೊಲೀಸ್, ಇಂಡಿಯನ್ ಕೋಸ್ಟ್ ಗಾರ್ಡ್, ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರ, ಸ್ಥಳೀಯ ಮೀನುಗಾರರು ಮತ್ತು ಇತರ ದೋಣಿಗಳು ಪ್ರವಾಸಿಗರನ್ನು ರಕ್ಷಿಸಲು ಭಾರಿ ರಕ್ಷಣಾ ಕಾರ್ಯಾಚರಣೆಯನ್ನು ನಡೆಸುತ್ತಿವೆ.
ಅಪಘಾತ ಸಂಭವಿಸುವ ಕೆಲವೇ ಕ್ಷಣಗಳ ಮುಂಚೆ ಸೆರೆಹಿಡಿದ ದೃಶ್ಯಗಳಲ್ಲಿ ನೌಕಾಪಡೆಯ ಸ್ಪೀಡ್ ಬೋಟ್ ಚಲಾಯಿಸಲಾಗುತ್ತಿತ್ತು. ಆದರೆ, ಅತಿವೇಗದ ಸ್ಪೀಡ್ ಬೋಟ್ ಯು-ಟರ್ನ್ ತೆಗೆದುಕೊಂಡು ಹಡಗಿನ ಸಮೀಪಕ್ಕೆ ಬಂದು ಬಲವಾಗಿ ಡಿಕ್ಕಿ ಹೊಡೆದಿರುವುದನ್ನು ಕಾಣಬಹುದು.
ಹಡಗಿಗೆ ನೌಕಾಪಡೆಯ ಸ್ಪೀಡ್ ಬೋಟ್ ಡಿಕ್ಕಿಯಾಗಿ 13 ಮಂದಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ದುರಂತದಲ್ಲಿ ಮೃತಪಟ್ಟವರ ಕುಟಂಬಕ್ಕೆ ತಲಾ 5 ಲಕ್ಷ ಪರಿಹಾರ ನೀಡುವುದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಘೋಷಿಸಿದ್ದಾರೆ.
ಎಲಿಫೆಂಟಾ ದ್ವೀಪವು ಭಗವಾನ್ ಶಿವ ಮತ್ತು ಇತರ ಹಿಂದೂ ದೇವತೆಗಳಿಗೆ ಸಮರ್ಪಿತವಾದ ವಿಶ್ವಪ್ರಸಿದ್ಧ ದೇವಾಲಯಗಳ ಗುಂಪಾಗಿದೆ, ಇದನ್ನು 1,500-2,200 ವರ್ಷಗಳ ಹಿಂದೆ ಬಂಡೆಯಿಂದ ಕೆತ್ತಲಾಗಿದೆ ಎಂದು ಹೇಳಲಾಗುತ್ತದೆ ಮತ್ತು ಇದು ಮಹಾರಾಷ್ಟ್ರದಲ್ಲಿ ನೋಡಲೇಬೇಕಾದ ಪ್ರವಾಸಿ ಸ್ಥಳಗಳಲ್ಲಿ ಒಂದಾಗಿದೆ.