ಭುವನೇಶ್ವರ: ಹಿಂದೂಗಳ ಖ್ಯಾತ ಪವಿತ್ರ ಯಾತ್ರಾತಾಣ ಪುರಿ ಜಗನ್ನಾಥನ ದೇಗುಲದಲ್ಲಿ ನೂತನ ವರ್ಷದಿಂದ ಹೊಸ ದರ್ಶನ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಒಡಿಶಾ ಸರ್ಕಾರ ತಿಳಿಸಿದೆ.
ಪುರಿ ಜಗನ್ನಾಥನ ದರ್ಶನಕ್ಕಾಗಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳಿಗೆ ಇನ್ನು ಮುಂದೆ ಉತ್ತಮ ಸೌಲಭ್ಯದಿಂದ ಕೂಡಿದ ಹೊಸ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಒಡಿಶಾ ಸರ್ಕಾರ ಭಾನುವಾರ ತಿಳಿಸಿದೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಒಡಿಶಾ ಕಾನೂನು ಸಚಿವ ಪೃಥ್ವಿರಾಜ್ ಹರಿಚಂದನ್, 'ಈ ಹೊಸ ವ್ಯವಸ್ಥೆಯು ಜನವರಿ 1ರಿಂದ ಪ್ರಾರಂಭವಾಗಲಿದ್ದು, ಈಗಾಗಲೇ ಅಗತ್ಯ ವ್ಯವಸ್ಥೆ ಮಾಡಲಾಗಿದೆ. ಕಾಮಗಾರಿ ಶೀಘ್ರ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ 30ರಿಂದ 31ರವರೆಗೂ ಎರಡು ದಿನಗಳ ಕಾಲ ಪ್ರಾಯೋಗಿಕವಾಗಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು. ಈ ವ್ಯವಸ್ಥೆಯು ಉತ್ತಮ ಸೌಲಭ್ಯಗಳಿಂದ ಕೂಡಿದೆ. ಮಹಿಳೆಯರು, ಮಕ್ಕಳು ಮತ್ತು ವಿಕಲಚೇತನರಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ದೇವರ ದರ್ಶನ ಪಡೆದ ಬಳಿಕ ದೇವಸ್ಥಾನದ ಪ್ರತ್ಯೇಕ ಬಾಗಿಲುಗಳ ಮಾರ್ಗವಾಗಿ ಭಕ್ತರು ಹೊರಗೆ ಬರಲಿದ್ದಾರೆ ಎಂದು ಹರಿಚಂದನ್ ತಿಳಿಸಿದ್ದಾರೆ.
ಹೊಸ ವ್ಯವಸ್ಥೆಗಳ ಪ್ರಕಾರ, ಭಕ್ತರು ಈಗಿರುವ ದ್ವಾರ (ಸತಪಹಚ) ಮೂಲಕ ಜಗನ್ನಾಥ ದೇವಾಲಯವನ್ನು ಪ್ರವೇಶಿಸುತ್ತಾರೆ ಮತ್ತು ನಿರ್ಗಮನವನ್ನು ಎರಡು ವಿಭಿನ್ನ ದ್ವಾರಗಳ (ಘಂಟಿ ಮತ್ತು ಗರಡ) ಮೂಲಕ ಮಾಡಲಾಗುವುದು.
ಇದಕ್ಕಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಡಿಸೆಂಬರ್ 27 ಅಥವಾ 28 ರೊಳಗೆ ಅಗತ್ಯ ಕೆಲಸಗಳನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಇದೇ ವೇಳೆ ಸಚಿವ ಹರಿಚಂದನ್ ಜಗನ್ನಾಥ ದೇವಸ್ಥಾನಕ್ಕೆ ಭೇಟಿ ನೀಡಿ, ಕಾಮಗಾರಿ ಪರಿಶೀಲಿಸಿದರು. ಈ ವೇಳೆ ಆಡಳಿತ ಮಂಡಳಿಯ (ಎಸ್ಜೆಟಿಎ) ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಧಿ ಜತೆಯಲ್ಲಿದ್ದರು.