ನವದೆಹಲಿ: ತಮ್ಮನ್ನು ಜೈಲಿಗೆ ಕಳುಹಿಸಿದರೂ ಶಾಲೆಗಳ ನಿರ್ಮಾಣ ಮತ್ತು ಜನರಿಗೆ ಉಚಿತ ಚಿಕಿತ್ಸೆಯಂತಹ ಅಭಿವೃದ್ಧಿ ಕಾರ್ಯಗಳು ನಿಲ್ಲುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ಹೇಳಿದ್ದಾರೆ.
ಇಂದು ಕಿರಾರಿಯಲ್ಲಿ ಎರಡು ಶಾಲಾ ಕಟ್ಟಡಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಕೇಜ್ರಿವಾಲ್, "ಮನೀಷ್ ಸಿಸೋಡಿಯಾ ಅವರು ಶಾಲೆಗಳನ್ನು ನಿರ್ಮಿಸಿದ ಕಾರಣಕ್ಕಾಗಿ ಜೈಲಿಗೆ ಹಾಕಲಾಯಿತು. ಮೊಹಲ್ಲಾ ಕ್ಲಿನಿಕ್ಗಳನ್ನು ಆರಂಭಿಸಿದ್ದರಿಂದ ಸತ್ಯೇಂದ್ರ ಜೈನ್ ಅವರನ್ನು ಜೈಲಿಗೆ ಕಳುಹಿಸಲಾಯಿತು" ಎಂದು ಹೇಳಿದರು.
ಇದನ್ನು ಓದಿ: ಅಪರಾಧ ತಡೆಯುವ ಬದಲು ಡ್ರಾಮಾ ಮಾಡುತ್ತಿದ್ದಾರೆ: ದೆಹಲಿ ಕ್ರೈಂ ಬ್ರ್ಯಾಂಚ್ ಪೊಲೀಸರ ವಿರುದ್ಧ ಕೇಜ್ರಿವಾಲ್ ಕಿಡಿ
ಇಡಿ ಮತ್ತು ಸಿಬಿಐ ಸೇರಿದಂತೆ ಎಲ್ಲಾ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಎಎಪಿ ನಾಯಕರು ವಿರುದ್ಧ ಬಿಡಲಾಗಿದೆ ಎಂದು ಕೇಜ್ರಿವಾಲ್ ಹೇಳಿದರು.
"ನೀವು ಕೇಜ್ರಿವಾಲ್ ಅವರನ್ನು ಜೈಲಿಗೆ ಹಾಕಿದರೂ, ಶಾಲೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳನ್ನು ನಿರ್ಮಿಸುವ ಮತ್ತು ದೆಹಲಿಯ ಜನರಿಗೆ ಉಚಿತ ಚಿಕಿತ್ಸೆ ನೀಡುವ ಕೆಲಸಗಳು ನಿಲ್ಲುವುದಿಲ್ಲ. ನಾವು ಅವರ ಪಕ್ಷಕ್ಕೆ ಸೇರಬೇಕೆಂದು ಬಿಜೆಪಿ ಬಯಸುತ್ತದೆ. ಆದರೆ ನಾವು ತಲೆಬಾಗುವುದಿಲ್ಲ ಎಂದು ದೆಹಲಿ ಸಿಎಂ ಪ್ರತಿಪಾದಿಸಿದರು.