ದೇಶ

ಇಡಿ ದಾಳಿ ಮೂಲಕ ಎಎಪಿ ನಾಯಕರನ್ನು ಹೆದರಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಪ್ರಯತ್ನ- ಅತಿಶಿ

Nagaraja AB

ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಇಡಿ ದಾಳಿ ನಡೆಸುವ ಮೂಲಕ ಎಎಪಿ ಪಕ್ಷವನ್ನು ಹೆದರಿಸಲು ಮತ್ತು ಮೌನಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಆಮ್ ಆದ್ಮಿ ಸರ್ಕಾರದ ಸಚಿವೆ ಅತಿಶಿ ಮಂಗಳವಾರ ಹೇಳಿದ್ದಾರೆ.

ಅಕ್ರಮ ಹಣ ವರ್ಗಾವಣೆ ಪ್ರಕರಣದ ಭಾಗವಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಕಾರ್ಯದರ್ಶಿ ಬಿಭವ್ ಕುಮಾರ್ ಮತ್ತು ಎಎಪಿ ರಾಜ್ಯಸಭಾ ಸಂಸದ ಮತ್ತು ಪಕ್ಷದ ಖಜಾಂಚಿ ಎನ್‌ಡಿ ಗುಪ್ತಾ ಅವರ ನಿವಾಸದಲ್ಲಿ ಇಡಿ ಶೋಧ ನಡೆಸಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಬೆಳಿಗ್ಗೆ 7 ಗಂಟೆಯಿಂದ ಕುಮಾರ್ ಮತ್ತು ಗುಪ್ತಾ ಅವರ ನಿವಾಸದಲ್ಲಿ ಇಡಿ ದಾಳಿ ನಡೆಸುತ್ತಿದೆ. ಇತರ ಎಎಪಿ ನಾಯಕರ ಮನೆಗಳ ಮೇಲೆ ದಿನವಿಡೀ ಹೆಚ್ಚಿನ ದಾಳಿ ನಡೆಯಲಿದೆ ಎಂದು ಅತಿಶಿ ಹೇಳಿದ್ದಾರೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷಿಗಳು ಮತ್ತು ಆರೋಪಿಗಳ ಹೇಳಿಕೆಗಳನ್ನು ತನಿಖಾ ಸಂಸ್ಥೆ ಬಲವಂತ ಮತ್ತು ಬೆದರಿಕೆಯ ಮೂಲಕ ಹೊರತೆಗೆಯಲಾಗಿದೆ ಎಂದು ಸಚಿವರು ಆರೋಪಿಸಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರವು ತನ್ನ ನಾಯಕರ ಮೇಲೆ ದಾಳಿ ನಡೆಸುವ ಮೂಲಕ ಎಎಪಿಯನ್ನು "ಹೆದರಿಸಲು ಮತ್ತು ಮೌನಗೊಳಿಸಲು ಇಡಿ ಬಳಸಲಾಗುತ್ತಿದೆ. ಎರಡು ವರ್ಷಗಳ ತನಿಖೆಯ ಹೊರತಾಗಿಯೂ ಅಬಕಾರಿ ನೀತಿ ಹಗರಣದ ತನಿಖೆಯಲ್ಲಿ ಏಜೆನ್ಸಿಗಳಿಗೆ ಏನೂ ದೊರೆತಿಲ್ಲ ಎಂದು ಅವರು ಹೇಳಿದರು.

ಇಡಿ ದಾಳಿಯ ಭಾಗವಾಗಿ ರಾಷ್ಟ್ರ ರಾಜಧಾನಿಯ ಸುಮಾರು 10 ಕಡೆಗಳಲ್ಲಿ ಇಡಿ ದಾಳಿ ನಡೆಸುತ್ತಿದೆ.ಇದು ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಯ ಭಾಗವೇ ಅಥವಾ ಹೊಸ ಪ್ರಕರಣಕ್ಕೆ ಸಂಬಂಧಿಸಿದ್ದಾಗಿದೆಯೇ ಎಂಬುದು ತಕ್ಷಣ ತಿಳಿದುಬಂದಿಲ್ಲ.

SCROLL FOR NEXT